ಸೋಮನಾಥ:ಭಾರತ ಯಾವುದೇ ಜಾಗತಿಕ ಒತ್ತಡಗಳಿಗೆ ಮಣಿಯುವುದಿಲ್ಲ ಮತ್ತು ಯಾರ ಮುಂದೆಯೂ ತಲೆಬಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಗುಜರಾತ್ ನ ಸೋಮನಾಥ ದೇವಾಲಯದ ಪುನರ್ ಪ್ರತಿಷ್ಠಾಪನೆಯ 75ನೇ ವರ್ಷದ 'ಅಮೃತ ಮಹೋತ್ಸವ'ದಲ್ಲಿ ಸೋಮನಾಥ ಮಂದಿರದ 75ನೇ ವರ್ಷದ ಸ್ಮರಣಾರ್ಥ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ 1998ರ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ಮತ್ತು ಸೋಮನಾಥದ ಪುನರುತ್ಥಾನದ ಇತಿಹಾಸವನ್ನು ಸ್ಮರಿಸಿಕೊಂಡಿದ್ದಾರೆ. ಇದೇ ವೇಳೆ ಪ್ರತಿಪಕ್ಷಗಳ ತುಷ್ಟೀಕರಣ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
1951ರ ಮೇ 11ರಂದು ಸೋಮನಾಥ ದೇವಾಲಯದ ಪ್ರಾಣ ಪ್ರತಿಷ್ಠಾಪನೆ ನಡೆಯಿತು. 1998ರ ಇದೇ ದಿನ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು. ಜಾಗತಿಕ ಶಕ್ತಿಗಳು ಆರ್ಥಿಕ ನಿರ್ಬಂಧಗಳನ್ನು ಹೇರಿದರೂ ಭಾರತ ಎದೆಗುಂದದೆ ಮೇ 13ರಂದು ಮತ್ತೆರಡು ಪರೀಕ್ಷೆಗಳನ್ನು ನಡೆಸಿ ಇಚ್ಛಾಶಕ್ತಿಯನ್ನು ಪ್ರದರ್ಶಿಸಿತು ಎಂದು ಮೋದಿ ಹೇಳಿದ್ದಾರೆ.
ಸೋಮನಾಥ ಮಂದಿರದ ಪುನರ್ ನಿರ್ಮಾಣದಿಂದ ಹಿಡಿದು ಅಯೋಧ್ಯೆಯ ರಾಮ ಮಂದಿರದವರೆಗೆ ಕೆಲವು ರಾಜಕೀಯ ಶಕ್ತಿಗಳು ದೇಶದ ಗೌರವಕ್ಕಿಂತ ತುಷ್ಟೀಕರಣಕ್ಕೆ ಒತ್ತು ನೀಡುತ್ತಾ ಬಂದಿವೆ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ದಾರ್ ಪಟೇಲ್ ಮತ್ತು ಬಾಬು ರಾಜೇಂದ್ರ ಪ್ರಸಾದ್ ಅವರು ಸೋಮನಾಥ ಮಂದಿರ ಮರುನಿರ್ಮಾಣಕ್ಕೆ ಶ್ರಮಿಸಿದಾಗ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ವಿರೋಧ ವ್ಯಕ್ತಪಡಿಸಿದ್ದನ್ನು ಮೋದಿ ಸ್ಮರಿಸಿಕೊಂಡರು.