ಬೆಂಗಳೂರು: ಅಭಿವೃದ್ಧಿಯನ್ನು ಮರೆತು ಹಿಂದೂಗಳಿಗೆ ಅಪಮಾನ ಮಾಡಿಕೊಂಡು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಜಾಬ್ಗೆ ಅವಕಾಶ ಕೊಡುವುದಾಗಿ ಅಧಿಕೃತ ಮುದ್ರೆಯನ್ನು ಒತ್ತಲಾಗಿದೆ. ಇದು ಸರಿಯಾದ ನಿರ್ಧಾರ ಅಲ್ಲ. ಮಾಡಬೇಕಾದ ಕೆಲಸಗಳನ್ನು ಬಿಟ್ಟು, ಶಾಲಾ, ಕಾಲೇಜುಗಳಲ್ಲೂ ಹಿಂದೂ, ಮುಸಲ್ಮಾನ ಎಂದು ಬೆಂಕಿ ಹಚ್ಚುವ ಕೆಲಸಕ್ಕೆ ಕಾಂಗ್ರೆಸ್ ಸರಕಾರ ಕೈ ಹಾಕಿದೆ. ಬರುವ ದಿನಗಳಲ್ಲಿ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಅಲ್ಪಸಂಖ್ಯಾತರನ್ನು ಖುಷಿಪಡಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಲೇ ಇದೆ. ಓಲೈಕೆ ರಾಜಕಾರಣ ಒಂದು ಕಡೆಯಾದರೆ, ಹಿಂದೂಗಳಿಗೆ ಅಪಮಾನ ಮಾಡುವ ಕೆಲಸವನ್ನು ಮತ್ತೊಂದು ಕಡೆ ಮಾಡುತ್ತಲೇ ಇದೆ. ಹಿಂದೂಗಳ ವಿರುದ್ಧ ಮುಸಲ್ಮಾನರು ಹಾಗೂ ಮುಸಲ್ಮಾನರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಷಡ್ಯಂತ್ರ, ಕುತಂತ್ರವನ್ನು ಕಾಂಗ್ರೆಸ್ ಸರಕಾರ ಮಾಡುತ್ತಲೇ ಇದೆ. ಉಪ ಚುನಾವಣೆ ಗೆದ್ದ ಅಮಲಿನಲ್ಲಿ ಕಾಂಗ್ರೆಸ್ಸಿನವರು ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರಬಹುದು ಎಂದು ಟೀಕಿಸಿದರು.
ಹಿಂದೆ 2018ರಲ್ಲಿ ಈ ಸರಕಾರ ಸೋಲುವ ಮುನ್ನ 2 ಉಪ ಚುನಾವಣೆಗಳಲ್ಲಿ ಗೆದ್ದಿತ್ತು. ಆಮೇಲೆ ಜನರು ಪಾಠ ಕಲಿಸಿದ್ದರು ಎಂಬುದನ್ನು ಮುಖ್ಯಮಂತ್ರಿಗಳಿಗೆ ನೆನಪಿಸಲು ಬಯಸುವುದಾಗಿ ಹೇಳಿದರು.
ಒಂದು ದೇಶ ಒಂದೇ ಚುನಾವಣೆ, ಮಹಿಳಾ ಮೀಸಲಾತಿ ಎಸ್ಐಆರ್ ಎಲ್ಲವನ್ನೂ ವಿರೋಧ ಮಾಡುತ್ತಾರೆ. ಪ್ರಧಾನಿ ಮೋದಿ ಅವರ ಜನಪ್ರಿಯತೆ ಸಹಿಸಲು ಕಾಂಗ್ರೆಸ್ಸಿನವರಿಗೆ ಸಾಧ್ಯವಾಗುತ್ತಿಲ್ಲ. ಎನ್ಡಿಎ ಸರಕಾರದ ಪ್ರತಿಯೊಂದು ನಿರ್ಧಾರ, ಯೋಜನೆಗಳನ್ನು ವಿರೋಧ ಮಾಡುವುದೇ ಈ ಕಾಂಗ್ರೆಸ್ ಸರಕಾರದ ದಿನನಿತ್ಯದ ಕೆಲಸ ಎಂದು ಟೀಕಿಸಿದರು.