ರಾಜ್ಯದಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಮುಂದುವರಿದಿದ್ದು, ಕನಕಪುರದ ಪ್ರವಾಸಿ ಸ್ಥಳ ಸಂಗಮದಲ್ಲಿ ಮಹಿಳೆಯೋರ್ವರ ಮೇಲೆ ಕಾಡಾನೆ ಇತ್ತೀಚೆಗಷ್ಟೇ ದಾಳಿ ನಡೆಸಿತ್ತು. ಏಕಾಏಕಿ ಬಂದ ಕಾಡಾನೆ ಕಂಡು ಪ್ರಾಣ ಭೀತಿಯಿಂದ ಜನರು ದಿಕ್ಕಾಪಾಲಾಗಿ ಓಡುವ ವಿಡಿಯೋ ವೈರಲ್ ಆಗಿತ್ತು. ಆ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಚೀಲಂದವಾಡಿ ಗ್ರಾಮದಲ್ಲಿ ಒಂಟಿ ಸಲಗ ದಾಳಿಗೆ ವ್ಯಕ್ತಿಯೋರ್ವರ ಬಲಿಯಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಕರಿಗುಂಡ(55) ಎಂಬವರು ಮೃತಪಟ್ಟಿದ್ದಾರೆ. ಸಂಗಮ ಅರಣ್ಯ ವಲಯ ಪ್ರದೇಶ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕರಿಗುಂಡ ಅವರ ಮೃತದೇಹವನ್ನು ಕನಕಪುರ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.