ಬೆಂಗಳೂರು: ಸಾರಿಗೆ ಇಲಾಖೆಯ ಮೋಟಾರು ವಾಹನ ಕಾಯ್ದೆಯಡಿಯಲ್ಲಿ 2016ರಲ್ಲಿ ಜಾರಿಗೆ ಬಂದಿರುವ ಆನ್ ಡಿಮ್ಯಾಂಡ್ ಸೇವೆಗಳ ನಿಯಮಗಳನ್ನು ಸಾರಿಗೆ ಇಲಾಖೆ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಸಾರ್ವಜನಿಕರು ಮತ್ತು ಅನ್ಯ ಭಾಷಾ ಚಾಲಕರ ನಡುವೆ ಕಾಲಕಾಲಕ್ಕೆ ಉಂಟಾಗುವ ಭಾಷಾ ಸಂಘರ್ಷದ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಈ ಕುರಿತಂತೆ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಸೂಚನೆ ನೀಡಿರುವ ಬಿಳಿಮಲೆ, ಸಾರ್ವಜನಿಕ ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುವಂತಹ ವ್ಯಕ್ತಿಗಳು ಸ್ಥಳೀಯ ಭಾಷೆಯ ಕನಿಷ್ಠ ಜ್ಞಾನವನ್ನು ಹೊಂದಿರುವುದು ಕಡ್ಡಾಯವಾಗಿದ್ದು, ನಿಯಮಗಳಲ್ಲಿ ಅವಕಾಶವಿದ್ದರೂ ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡದ ಕಾರಣ ಹಲವಾರು ಬಾರಿ ಅನ್ಯಭಾಷಿಕ ವಾಹನ ಚಾಲಕರು ಮತ್ತು ಕನ್ನಡಿಗ ಪ್ರಯಾಣಿಕರ ನಡುವೆ ವಾಗ್ವಾದಗಳು ಸಂಭವಿಸುತ್ತಿದ್ದು, ಇದು ಕಳವಳಕಾರಿ ಎಂದು ಹೇಳಿದ್ದಾರೆ.
The Karnataka On- demand Transportation Technology Aggregators ನಿಯಮಗಳು 2016ರ ಉಪನಿಯಮ (8)ರಲ್ಲಿ ಕರ್ನಾಟಕದಲ್ಲಿ ವಾಹನ ಚಾಲನೆಯನ್ನು ಮಾಡುವ ಚಾಲಕ ಈ ನಾಡಿನಲ್ಲಿ ಕನಿಷ್ಠ ಎರಡು ವರ್ಷಗಳು ವಾಸವಿರಬೇಕಿದ್ದು, ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವಂತವನಾಗಿರಬೇಕಾಗುತ್ತದೆ ಮತ್ತು ಇಲ್ಲಿನ ನಾಗರಿಕರೊಂದಿಗೆ ಸಂಯಮದಿಂದ ವರ್ತಿಸುವ ವ್ಯಕ್ತಿಯಾಗಿರಬೇಕಾಗುತ್ತದೆ ಎಂಬ ಅಂಶವನ್ನು ಸ್ಪಷ್ಟವಾಗಿ ಅಳವಡಿಸಲಾಗಿರುತ್ತದೆ ಎಂದಿರುವ ಬಿಳಿಮಲೆ, ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ವಿಶೇಷವಾಗಿ ಬೆಂಗಳೂರು ನಗರದ ಕನ್ನಡಿಗರು ಎದುರಿಸುತ್ತಿರುವ ಸುದೀರ್ಘ ಸಮಸ್ಯೆಗೆ ಸಾರಿಗೆ ಇಲಾಖೆ ಪರಿಹಾರ ದೊರಕಿಸಬೇಕೆಂದು ಹೇಳಿದ್ದಾರೆ.
ಕನ್ನಡ ಬಾರದ ವಾಹನ ಚಾಲಕರನ್ನು ಒಂದೆಡೆ ಸೇರಿಸಿ ಅವರಿಗೆ ಕನ್ನಡವನ್ನು ಕಲಿಸುವ ಪ್ರಯತ್ನವನ್ನು ಸಹ ಸಾರಿಗೆ ಇಲಾಖೆ ಮಾಡಬಹುದೆಂದು ಸಲಹೆ ನೀಡಿರುವ ಬಿಳಿಮಲೆ, ಅವಶ್ಯಕತೆಗನುಸಾರವಾಗಿ ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರ ಇರುತ್ತದೆ ಎಂದು ಹೇಳಿದ್ದಾರೆ.