ಬೆಂಗಳೂರು: ನೈರುತ್ಯ ರೈಲ್ವೆ ಪರೀಕ್ಷೆಯನ್ನು ಕನ್ನಡ ಬಾಷೆಯಲ್ಲಿ ಬರೆಯಲು ಅವಕಾಶ ನಿರಾಕರಿಸಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೈರುತ್ಯ ರೈಲ್ವೆ ಇಲಾಖೆಯು ನಡೆಸುತ್ತಿರುವ ವಿವಿಧ ಹುದ್ದೆಗಳ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗುತ್ತಿದೆ. ಈ ಹಿಂದೆ ಪ್ರತಿಭಟನೆಗಳ ನಂತರ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಆದರೂ ಇದೀಗ ಮತ್ತೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಪರೀಕ್ಷೆ ನಡೆಸಲು ರೈಲ್ವೆ ಮಂಡಳಿ ಮುಂದಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.
ಆಫೀಸ್ ಸೂಪರಿಂಟೆಂಡೆಂಟ್ ಸೇರಿದಂತೆ ಒಟ್ಟು 73 ಹುದ್ದೆಗಳ ಮುಂಬಡ್ತಿಗಾಗಿ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದಿದ್ದರೆ ರಾಜ್ಯದಲ್ಲಿ ಒಂದು ರೈಲನ್ನೂ ಓಡಲು ಬಿಡುವುದಿಲ್ಲ ಮತ್ತು ರಾಜ್ಯಾದ್ಯಂತ ರೈಲು ಸಂಚಾರ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರ ಹಾಗೂ ರೈಲ್ವೆ ಸಚಿವರು ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿದ ಅವರು, ರೈಲ್ವೆ ಪರೀಕ್ಷೆಗಳಲ್ಲಿ ತ್ರಿಭಾಷಾ ಸೂತ್ರದಡಿ ಕನ್ನಡ-ಇಂಗ್ಲಿಷ್-ಹಿಂದಿ ವ್ಯವಸ್ಥೆಯನ್ನು ಅಳವಡಿಸಲೇಬೇಕು. ಅಧಿಕಾರಿಗಳು ತಮ್ಮ ಸುತ್ತೋಲೆಯಲ್ಲಿನ ದೋಷ ಸರಿಪಡಿಸಿ ಕನ್ನಡದಲ್ಲಿ ಪರೀಕ್ಷೆ ನಡೆಸಲು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು. ಇತರ ಕನ್ನಡ ಪರ ಸಂಘಟನೆಗಳೂ ಇದೇ ಆಗ್ರಹ ಮಾಡಿವೆ.