ದರ್ಶನ್ ಸಿನಿಮಾದಲ್ಲಿ ನಟಿಸಿದ ನಟ ನಿರಂಜನ್ ಮೇಲೆ ಬೆಂಗಳೂರಿನ ಬಾರ್ನಲ್ಲಿ ಅಪರಿಚಿತರಿಂದ ಬಿಯರ್ ಬಾಟಲಿಯಿಂದ ಹಲ್ಲೆ ನಡೆದಿದೆ. ಮಾರ್ಚ್ 28ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಣ್ಣ ಜಗಳ, ದೊಡ್ಡ ಗಲಾಟೆಗೆ ತಿರುಗಿ, ಕೊನೆಗೆ ಬಿಯರ್ ಬಾಟಲ್ ಬಳಸಿ ನಟನ ಮೇಲೆ ದಾಳಿ ನಡೆಸುವ ಮಟ್ಟಕ್ಕೆ ಹೋಗಿದೆ. ಈ ಘಟನೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಆತಂಕ ಮೂಡಿಸಿದೆ. ಹೌದು ಕನ್ನಡ ಚಿತ್ರರಂಗದಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿರುವ ನಟ ನಿರಂಜನ್ ದರ್ಶನ್ ಅಭಿನಯದ ‘ಒಡೆಯ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ದರ್ಶನ್ ಸಹೋದರನ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಪಾತ್ರದಲ್ಲಿ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ನೀಡಿತು. ಈಗ ಅವರು ವಿವಾದದ ಮೂಲಕ ಸುದ್ದಿ ಆಗಿದ್ದಾರೆ. ಕೆಲಸದ ನಿಮಿತ್ತ ನಟ ಯಶಸ್ ಸೂರ್ಯ ನಿವಾಸಕ್ಕೆ ನಿರಂಜನ್ ತೆರಳಿದ್ದರು. ಭೇಟಿ ಬಳಿಕ ಮಂತ್ರಿ ಅಲೈಯನ್ಸ್ ಬಳಿ ಇರುವ ಒಂದು ಬಾರ್ಗೆ ಹೋಗಿದ್ದರು.
ಬಾರ್ ಒಳಗೆ ಇದ್ದಾಗ ನಿರಂಜನ್, ಅವರು ನೀರು ಕುಡಿಯಲು ಕಿಚನ್ ಭಾಗಕ್ಕೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಅಚಾನಕ್ ಆಗಿ ಒಬ್ಬ ವ್ಯಕ್ತಿ ಅವರಿಗೆ ತಳ್ಳಾಟ ಮಾಡಿದ್ರು. ಇದಕ್ಕೆ ಕಾರಣ ಕೇಳಿದಾಗ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿದೆ. ಕಿರಿಕ್ ಮಿತಿ ಮೀರಿದ್ದು, ಬಿಯರ್ ಬಾಟಲಿಯಿಂದ ನಟನ ಮೇಲೆ ಹಲ್ಲೆ ಮಾಡಲಾಗಿದೆ. ಜಗಳ ನಡೆದ ಕೆಲವೇ ಕ್ಷಣದಲ್ಲಿ ಮತ್ತೊಂದು ಗುಂಪು ಬಾರ್ಗೆ ಬಂದು ಬಿಯರ್ ಬಾಟಲ್ ಬಳಸಿ ನಿರಂಜನ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಿರಂಜನ್ ನಟ ಎಂಬ ವಿಷಯ ಅಪರಿಚಿತ ವ್ಯಕ್ತಿಗೆ ಗೊತ್ತಾಗಿದೆ. ‘ನೀನು ನಟನಾದರೆ ನನಗೇನು’ ಎಂದು ಅಪರಿಚಿತ ವ್ಯಕ್ತಿ ಬೈದಿದ್ದ. ಈ ವಿಷಯದ ಬಗ್ಗೆ ಬಾರ್ ಮಾಲೀಕರ ಜೊತೆ ಮಾತನಾಡುವಾಗ ಬಂದ ನಾಲ್ವರು ನಿರಂಜನ್ ಜೊತೆ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಬಿಯರ್ ಬಾಟಲಿಯಿಂದ ನಟನ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ.
ಘಟನೆ ನಡೆದ ರೀತಿ ನೋಡಿದಾಗ, ಇದು ಪೂರ್ವ ಯೋಜಿತವೋ ಅಥವಾ ಅಚಾನಕ್ ಆಗಿ ಆದ ಗಲಾಟೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನು ಈ ಘಟನೆ ನಡೆದ ಬಳಿಕ ನಿರಂಜನ್ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.