ಬೆಂಗಳೂರು: ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಪ್ರಶ್ನಾತೀತ ನಾಯಕ. ಅವರ ಮುತ್ಸದ್ಧಿತನ, ನಾಯಕತ್ವ, ಮಾರ್ಗದರ್ಶನ ಮುಂದಿಟ್ಟುಕೊಂಡೇ ನಮ್ಮ ಸರ್ಕಾರ ಮುನ್ನಡೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ವಿಚಾರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಹೈಕಮಾಂಡ್ ಹೇಳಿದಂತೆ ಸಿದ್ದರಾಮಯ್ಯ ನಡೆದುಕೊಂಡಿದ್ದಾರೆ. ಅವರು ನಮ್ಮ ನಾಯಕರು, ಪ್ರಶ್ನಾತೀತ ನಾಯಕರು. ಅವರ ನಾಯಕತ್ವ, ಮಾರ್ಗದರ್ಶನ ಮುಂದೆಯೂ ಇರುತ್ತದೆ ಎಂದು ಹೇಳಿದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ನಾಯಕರ ಆಯ್ಕೆ ನಡೆಯುತ್ತದೆ. ಪಕ್ಷದಲ್ಲಿ ಅದಕ್ಕೊಂದು ವ್ಯವಸ್ಥೆ ಇದೆ, ಅದರಂತೆ ನಡೆಯುತ್ತದೆ ಎಂದು ಹೇಳಿದರು.