ನವದೆಹಲಿ: 15ನೇ ಹಣಕಾಸು ಆಯೋಗದ ಅಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಮೀಸಲಾದ ರೂ. 8,000 ಕೋಟಿಗೂ ಹೆಚ್ಚು ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಸದಸ್ಯ ಸಯ್ಯದ್ ನಾಸೀರ್ ಹುಸೇನ್ ರಾಜ್ಯಸಭೆಯಲ್ಲಿ ಆಗ್ರಹಪಡಿಸಿದ್ದಾರೆ.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು 15ನೇ ಹಣಕಾಸು ಆಯೋಗದ ಅಡಿಯಲ್ಲಿ ನೀಡಬೇಕಿದ್ದ ಅನುದಾನ ಕುರಿತು ಮಾತನಾಡಿದರು. 6,000 ಗ್ರಾಮ ಪಂಚಾಯಿತಿಗಳಿಗೆ ಮೀಸಲಾದ ರೂ.2,133 ಕೋಟಿ, ನರೇಗಾ ಯೋಜನೆ ಅಡಿಯಲ್ಲಿ 1,066 ಕೋಟಿ ರೂ. ಹಾಗೂ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ರೂ.6,976 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಸರ್ಕಾರದ ಗಮನ ಸೆಳೆದರು.
ರಾಜ್ಯದ 6,000 ಗ್ರಾಮ ಪಂಚಾಯಿತಿಗಳಿಗೆ ಮೀಸಲಾದ 2,133 ಕೋಟಿ ರೂ. ಅನುದಾನವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಕರ್ನಾಟಕವು ಎಲ್ಲಾ ನಿಯಮಗಳನ್ನು ಪೂರೈಸಿದ್ದರೂ, ಮೊದಲ ಕಂತಿನ 1,092 ಕೋಟಿ ರೂ ಮೊತ್ತವನ್ನು ಬಿಡುಗಡೆ ಮಾಡಿಲ್ಲ. ಅನುದಾನವನ್ನು ನಿರಂತರವಾಗಿ ತಡೆಹಿಡಿಯುವುದು ಗ್ರಾಮೀಣ ಆಡಳಿತಕ್ಕೆ ಹಾನಿಕಾರಕ ಮತ್ತು ನ್ಯಾಯಸಮ್ಮತ ಅಲ್ಲ ಎಂದು ಸದನದ ಗಮನಕ್ಕೆ ತಂದರು.
ಹಣ ಬಿಡುಗಡೆಯಾಗದ ಕಾರಣ ನೈರ್ಮಲ್ಯ ಕಾರ್ಮಿಕರು ಮತ್ತು ಸಿಬ್ಬಂದಿಗೆ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ, ನೈರ್ಮಲ್ಯ ಮತ್ತು ಬೀದಿ ದೀಪಗಳ ನಿಯಮಿತ ನಿರ್ವಹಣೆಗೆ ಅಡ್ಡಿಯಾಗಿದೆ. ಹಲವಾರು ಪಂಚಾಯಿತಿಗಳು ತಮ್ಮ ಖಾತೆಗಳಲ್ಲಿ ಮೂಲಭೂತ ವೆಚ್ಚಗಳನ್ನು ಸಹ ಪೂರೈಸಲು ಅನುದಾನದ ಕೊರತೆ ಎದುರಿಸುತ್ತಿವೆ ಎಣದರು.
ನರೇಗಾ ಯೋಜನೆಯಡಿಯಲ್ಲಿ ಕರ್ನಾಟಕಕ್ಕೆ ರೂ. 1,066 ಕೋಟಿ ಮತ್ತು ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ 6,976 ಕೋಟಿ ಬಾಕಿ ಇದ್ದು, ಈ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.