ಬೆಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸುವಂತೆ ಮೆಟ್ರೋ ರೈಲು ನಿಲ್ದಾಣದಲ್ಲಿ ಪ್ರತಿಭಟನೆಗೆ ಮುಂದಾದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಬಂಧಿಸಿದ ಸರ್ಕಾರದ ವಿರುದ್ಧ ಬಿಜೆಪಿ ತಿರುಗಿ ಬಿದ್ದಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪಕ್ಷ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಬಹುತೇಕ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹದಗೆಟ್ಟಿರೋ ಆರ್ಥಿಕ ಪರಿಸ್ಥಿತಿ ಮತ್ತು ಜನರಿಗೆ ಹೊರೆಯಾಗಿರೋ #MetroFares ಬಗ್ಗೆ ಸತ್ಯ ಮಾತನಾಡುತ್ತಿರುವ ಒಬ್ಬ ಚುನಾಯಿತ ನಾಯಕನನ್ನು ಬಂಧಿಸಿ, ಬಲಪ್ರಯೋಗ ಮಾಡುವುದಾದರೆ, ಇನ್ನು ಜನಸಾಮಾನ್ಯರ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಕಾಂಗ್ರೆಸ್ ಆಳ್ವಿಕೆಯ ಕರ್ನಾಟಕದಲ್ಲಿ ಸರ್ಕಾರ ಅಂದ್ರೆ ಬರೀ ದ್ವೇಷದ ರಾಜಕಾರಣ ಅನ್ನೋ ಹಾಗಾಗಿದೆ. ಪ್ರಶ್ನೆಗಳಿಗೆ ಇಲ್ಲಿ ಕೈಕೋಳಗಳೇ ಉತ್ತರ, ಸತ್ಯಕ್ಕೆ ಇಲ್ಲಿ ಬೆದರಿಕೆಗಳೇ ಪ್ರತಿಕ್ರಿಯೆ.
ಮುಖ್ಯಮಂತ್ರಿ @siddaramaiah ನವರೇ ನೀವು ನಾಯಕರನ್ನ ಜೈಲಿಗೆ ಹಾಕಬಹುದು, ಆದರೆ ವಾಸ್ತವಗಳನ್ನಲ್ಲ. ಧ್ವನಿಗಳನ್ನ ಬಂಧಿಸಬಹುದು, ಆದರೆ ಸತ್ಯವನ್ನಲ್ಲ. ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಬಯಲಿಗೆಳೆಯುವುದನ್ನು @BJP4India ನಿಲ್ಲಿಸಲ್ಲ. ಬೆಂಗಳೂರನ್ನು ಬೆದರಿಸಿ ಮೌನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.