ಕಾನೂನು ಪಾಲಿಸಬೇಕಾದ ಅಧಿಕಾರಿಯೇ ನಿಯಮಗಳನ್ನು ಗಾಳಿಗೆ ತೂರಿ, ಪೊಲೀಸ್ ಸಮವಸ್ತ್ರದ ಘನತೆಯನ್ನು ಮರೆತ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಜೈ ಕುಮಾರ್ ಅವರು, ಪೊಲೀಸ್ ಸಮವಸ್ತ್ರದಲ್ಲೇ ಪತ್ನಿ ಮತ್ತು ಮಕ್ಕಳೊಂದಿಗೆ ಸರ್ಕಾರಿ ವಾಹನದಲ್ಲಿ (ಓಪನ್ ಜೀಪ್) ಕಾಡಂಚಿನ ಪ್ರದೇಶದಲ್ಲಿ (ಬಫರ್ ಝೋನ್) ಸುತ್ತಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಈ ವಿಡಿಯೋಗೆ ಆಕರ್ಷಕ ಹಿನ್ನೆಲೆ ಸಂಗೀತ ಸೇರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಶೋಕಿ ಪ್ರದರ್ಶಿಸಿದ್ದಾರೆ.
ಪೊಲೀಸ್ ಇಲಾಖೆಯ ವಾಹನ ಮತ್ತು ಸಮವಸ್ತ್ರವನ್ನು ವೈಯಕ್ತಿಕ ಪ್ರವಾಸ ಹಾಗೂ ಪ್ರಚಾರಕ್ಕೆ ಬಳಸಿಕೊಂಡಿರುವ ಇನ್ಸ್ಪೆಕ್ಟರ್ ಅವರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಬೇಜವಾಬ್ದಾರಿ ವರ್ತನೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.