ಬೆಂಗಳೂರು: ಅಧಿಕಾರ ಹಂಚಿಕೆ ಕುರಿತ ಚರ್ಚೆ ಬಿರುಸುಗೊಂಡ ಬೆನ್ನಲ್ಲೇ 25ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸಕ್ಕೆ ಸಜ್ಜಾಗಿದ್ದಾರೆ.
ಇವರಲ್ಲಿ ಬಹುತೇಕ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಎನ್ನುವುದು ಗಮನಾರ್ಹ.
ಮುಖ್ಯಮಂತ್ರಿ ಬದಲಾವಣೆ ಕುರಿತು ರಾಜಕೀಯ ಚಟುವಟಿಕೆಗಳು ಮುನ್ನೆಲೆಗೆ ಬಂದ ಮಧ್ಯೆಯೇ ಕಾಂಗ್ರೆಸ್ನ 35 ಶಾಸಕರ ತಂಡ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರು ತಮ್ಮ ಸ್ವಂತ ಹಣದಲ್ಲಿ ವಿದೇಶ ಪ್ರವಾಸ ಕೈಗೊಂಡರೆ ತಪ್ಪೇನು ಎಂದು ಸಮರ್ಥಿಸಿಕೊಂಡಿದ್ದರು.
ಆದರೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಾಸಕರ ಈ ವಿದೇಶ ಪ್ರವಾಸವು ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟು ಮಾಡಲಿದೆ ಎಂದು ವರಿಷ್ಠರ ಗಮನಕ್ಕೆ ತಂದಿದ್ದರು. ನಂತರ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಪ್ರವಾಸ ಕೈಗೊಳ್ಳದಂತೆ ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ. ಅಂತಿಮವಾಗಿ ಇಂದು ಶಾಸಕರು ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ಇವರೇ ಆ ಶಾಸಕರು:
ಸಚಿವ ಕೆ.ವೆಂಕಟೇಶ್, ಶಾಸಕರಾದ ಅಲ್ಲಮ ಪ್ರಭು ಪಾಟೀಲ, ಬಿ.ಬಿ. ಚಿಮ್ಮನಕಟ್ಟಿ, ಪುಟ್ಟರಂಗಶೆಟ್ಟಿ, ರಾಘವೇಂದ್ರ ಹಿಟ್ನಾಳ್,ಎಚ್.ಡಿ. ತಮ್ಮಯ್ಯ, ದೇವೇಂದ್ರಪ್ಪ, ಮಹಾಂತೇಶ ಕೌಜಲಗಿ, ಅನಿಲ್ ಚಿಕ್ಕಮಾದು, ರಘುಮೂರ್ತಿ ಮತ್ತಿತರರು ಆಸ್ಟ್ರೇಲಿಯಾ, ನ್ಯೂಜಿಲೆಂಡ್ಗೆ ತೆರಳಲಿದ್ದು, ಮಾರ್ಚ್ 3ರಂದು ಮರಳಲಿದ್ದಾರೆ.
ಹಂಪನಗೌಡ ಬಾದರ್ಲಿ, ಯಶವಂತರಾಯ ಗೌಡ ಪಾಟೀಲ್, ಬಿ.ಎಂ ನಾಗರಾಜ, ಜೆ.ಟಿ ಪಾಟೀಲ್, ಅಲ್ಲಮ ಪ್ರಭು ಪಾಟೀಲ್, ಬಸನಗೌಡ ದದ್ದಲ, ಎ.ಆರ್. ಕೃಷ್ಣಮೂರ್ತಿ, ಬಸನಗೌಡ ತುರವೀಹಾಳ, ವಿಧಾನ ಪರಿಷತ್ತಿನ ಸದಸ್ಯರಾದ ವಸಂತ ಕುಮಾರ್, ಶರಣಗೌಡ ಬಯ್ಯಾಪುರ ಅವರ ಹೆಸರೂ ಪಟ್ಟಿಯಲ್ಲಿದೆ.