ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಮಹಿಳೆ ಶರಣ್ಯ (35) ಅವರು ನಾಲ್ಕು ದಿನಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಏಪ್ರಿಲ್ 2ರ ಗುರುವಾರದಿಂದ ನಾಪತ್ತೆಯಾಗಿದ್ದ ಇವರನ್ನು ಭಾನುವಾರ (ಏ.5) ಸ್ಥಳೀಯ ಕುಡಿಯ ಜನಾಂಗದವರು ಕಾಡಿನೊಳಗೆ ಪತ್ತೆಹಚ್ಚಿದ್ದಾರೆ. ದಾರಿ ತಪ್ಪಿದ್ದ ಇವರ ಪತ್ತೆಯಾದ ಸುದ್ದಿ ತಿಳಿದು ಕುಟುಂಬಸ್ಥರು ಹಾಗೂ ಕಾರ್ಯಾಚರಣೆ ತಂಡಗಳು ನಿಟ್ಟುಸಿರು ಬಿಟ್ಟಿವೆ.
ಮಹಿಳೆಯ ಪತ್ತೆಗಾಗಿ ಜಿಲ್ಲಾಡಳಿತವು ಭಾರೀ ಮಟ್ಟದ ಕಾರ್ಯಾಚರಣೆ ಹಮ್ಮಿಕೊಂಡಿತ್ತು. ಅರಣ್ಯ ಇಲಾಖೆ, ಪೊಲೀಸ್, ಎಸ್ಡಿಆರ್ಎಫ್ (SDRF) ಹಾಗೂ ನಕ್ಸಲ್ ನಿಗ್ರಹ ದಳದ ಸದಸ್ಯರನ್ನು ಒಳಗೊಂಡ ಒಟ್ಟು 9 ತಂಡಗಳನ್ನು ನಿಯೋಜಿಸಲಾಗಿತ್ತು. ಆಧುನಿಕ ತಂತ್ರಜ್ಞಾನವಾದ ಥರ್ಮಲ್ ಡ್ರೋನ್ ಕ್ಯಾಮೆರಾಗಳು ಮತ್ತು ಶ್ವಾನದಳವನ್ನು ಬಳಸಿ ಸತತವಾಗಿ ಹುಡುಕಾಟ ನಡೆಸಲಾಗಿತ್ತು. ಕೊನೆಗೂ ಸ್ಥಳೀಯರ ಸಮಯಪ್ರಜ್ಞೆಯಿಂದ ಮಹಿಳೆಯನ್ನು ಪತ್ತೆಹಚ್ಚಿ ಕಾಡಿನಿಂದ ಹೊರಕ್ಕೆ ಕರೆತರಲಾಗುತ್ತಿದೆ.
ಕೇರಳದಿಂದ ಒಬ್ಬರೇ ಕೊಡಗಿಗೆ ಬಂದಿದ್ದ ಶರಣ್ಯ ಅವರು ಆನ್ಲೈನ್ ಮೂಲಕ ನೋಂದಾಯಿಸಿಕೊಂಡು ಚಾರಣ ಕೈಗೊಂಡಿದ್ದರು. ತಾವು ತಂಗಿದ್ದ ಹೋಂ ಸ್ಟೇಯವರಿಗೆ ಗುರುವಾರ ಮಧ್ಯಾಹ್ನ ಕರೆ ಮಾಡಿ ದಾರಿ ತಪ್ಪಿರುವುದಾಗಿ ತಿಳಿಸಿದ ಬೆನ್ನಲ್ಲೇ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸತತ ಮೂರು ದಿನಗಳ ಕಾಲ ದಟ್ಟಾರಣ್ಯದಲ್ಲಿ ಆಹಾರ ಮತ್ತು ಸೂಕ್ತ ಆಸರೆಯಿಲ್ಲದೆ ಕಳೆದುಹೋಗಿದ್ದ ಮಹಿಳೆ ಜೀವಂತವಾಗಿ ಸಿಕ್ಕಿರುವುದು ಪವಾಡ ಸದೃಶವಾಗಿದೆ.