ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1,000 ದಿನಗಳನ್ನು ಪೂರೈಸಿದ್ದು, ಇದಕ್ಕಾಗಿ ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ರಾಜ್ಯ ಕಂಡ ಅತ್ಯಂತ ದುರಾಡಳಿತದ ದಿನಗಳಿವು. ರಾಜ್ಯದ ಜನರನ್ನು ಓಲೈಕೆಯ ನೆಪದಲ್ಲಿ ಹಿಂಸಿಸಿದ, ಭ್ರಷ್ಟಾಚಾರ ಎಸಗಿದ, ಬೆಲೆ ಏರಿಕೆಯ ಮೂಲಕ ಜನರ ಜೇಬಿಗೆ ಕೈ ಹಾಕಿದ ಅಮಾನವೀಯ ಸರ್ಕಾರ ಇದಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಅವರು 1000 ದಿನಗಳ ಈ ಸಂಭ್ರಮಾಚರಣೆ ಏಕೆ ಆಚರಿಸುತ್ತಿದ್ದೀರಿ ಎಂದೂ ಪ್ರಶ್ನಿಸಿ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
-ನಿಮ್ಮ ಅವಧಿಯಲ್ಲಿ 3,731+ ರೈತರು ಆತ್ಮಹತ್ಯೆಗೆ ಶರಣಾಗಿದ್ದಕ್ಕಾಗಿಯೇ?
-ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 187 ಕೋಟಿ ರೂ.ಗಳನ್ನು ಲಪಟಾಯಿಸಿ, ತೆಲಂಗಾಣ ವಿಧಾನಸಭಾ ಚುನಾವಣೆಗೆಗಾಗಿ ಬಳಸಿಕೊಂಡದ್ದಕ್ಕಾಗಿಯೇ?
-ಎಸ್ಸಿ/ಎಸ್ಟಿ ಕಲ್ಯಾಣಕ್ಕಾಗಿ ಮೀಸಲಾದ 14,730 ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ, ದಲಿತ ಸಮುದಾಯಕ್ಕೆ ದ್ರೋಹ ಎಸಗಿದ್ದಕ್ಕಾಗಿಯೇ?
-ದಮನಿತ ಸಮುದಾಯಗಳ 10 ಕ್ಕೂ ಹೆಚ್ಚು ಅಭಿವೃದ್ಧಿ ನಿಗಮಗಳಿಗೆ ಪುಡಿಗಾಸೂ ನೀಡದ್ದಕ್ಕಾಗಿಯೇ?
-2,500 ಕೋಟಿ ರೂ. ಅಬಕಾರಿ ಹಗರಣ, 5,000 ಕೋಟಿ ರೂ. ಗೃಹಲಕ್ಷ್ಮಿ ಹಗರಣ, 187 ಕೋಟಿ ರೂ. ವಾಲ್ಮೀಕಿ ನಿಗಮ ಹಗರಣ, ಕಾರ್ಮಿಕ ಇಲಾಖೆ ಕಿಟ್ ಹಗರಣ ಹಾಗೂ ಮೈಸೂರಿನಲ್ಲಿ ಮುಡಾ ಹಗರಣ ನಡೆಸಿದ್ದಕ್ಕಾಗಿಯೇ?
ನುಡಿದಂತೆ ನಡೆಯುತ್ತೇವೆ ಎಂದು ಅಧಿಕಾರಕ್ಕೇರಿದ ಸಿದ್ದರಾಮಯ್ಯನವರು ಕಳೆದ 1000 ದಿನಗಳ ಕಾಲ ಕನ್ನಡಿಗರಿಗೆ ನೀಡಿದ್ದು, ಕೇವಲ ʼದುರಾಡಳಿತʼ, ʼಭ್ರಷ್ಟ ಆಡಳಿತʼ, ʼಅಭಿವೃದ್ಧಿಹೀನ ಆಡಳಿತʼವನ್ನಷ್ಟೇ.
ರಾಜ್ಯ ಕಾಂಗ್ರೆಸ್ ಸರ್ಕಾರ ಈ 1,000 ದಿನಗಳ ಸಂಭ್ರಮಾಚರಣೆಯಲ್ಲಿ ರೈತರ ಸಾವುಗಳು, ಎಸ್ಸಿ/ಎಸ್ಟಿ ಸಮುದಾಯಗಳಿಗೆ ಆಗಿರುವ ಅನ್ಯಾಯ ಮತ್ತು ಈ ತಾವು ಎಸಗಿರುವ ಹಗರಣಗಳ ಉತ್ತರ ನೀಡುತ್ತದೆಯೇ?