ರಾಮನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನಾಳೆ ಮುಷ್ಕರ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜತೆ ಚರ್ಚೆ ನಡೆಸುವಂತೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರಿಗೆ ಸೂಚಿಸಿರುವುದಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಬಿಡದಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಷ್ಕರ ನಡೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಬೇಡಿಕೆಗಳನ್ನು ಈಡೀರಿಸುವಂತೆ ಆಗ್ರಹಿಸಿ ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ. ನಾನೂ ಸಹ ಮಾತುಕತೆ ನಡೆಸಿ ಅವರ ಬೇಡಿಕೆಗಳಿಗೆ ಸ್ಪಂದಿಸಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಾರಿಗೆ ಬಸ್ ಗಳಲ್ಲಿ ಲಗೇಜ್ ದರ ಏರಿಕೆ ಕುರಿತು ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. 2021ರಲ್ಲಿ ಅವರದ್ದೇ ಸರ್ಕಾರವಿದ್ದಾಗ ಲಗೇಜ್ ದರ ಹೆಚ್ಚಿಸಿದ್ದರು. ಟಿಕೆಟ್ ದರ ಹೆಚ್ಚಳವಾದಾಗ ಸಹಜವಾಗಿಯೇ ಲಗೇಜ್ ದರವೂ ಏರಿಕೆಯಾಗುತ್ತದೆ. ನಾವು ಸ್ವಲ್ಪ ತಡವಾಗಿ ಮಾಡುತ್ತಿದ್ದೇವೆ. ಅವರ ಸರ್ಕಾರದ ಅವಧಿಯಲ್ಲೂ ಮಾಡಲಾಗಿತ್ತು ಎಂದು ತಿರುಗೇಟು ನೀಡಿದರು.
ದರ ಏರಿಕೆ ಕುರಿತು ಪ್ರತಿಕ್ರಿಯಿಸುವುದಕ್ಕೆ ಮುನ್ನ ಬಿಜೆಪಿಯವರು ತಮ್ಮ ಇತಿಹಾಸವನ್ನು ಒಮ್ಮೆ ನೋಡಿಕೊಳ್ಳಲಿ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರೋಧ ಪಕ್ಷಗಳಿಗೆ ಸದನದಲ್ಲೇ ಉತ್ತರ ಕೊಟ್ಟಿದ್ದಾರೆ. ಸದ್ಯ ಬಸ್ನಲ್ಲಿ 30 ಕೆ.ಜಿ.ವರೆಗಿನ ಲಗೇಜ್ ಉಚಿತವಾಗಿ ಸಾಗಿಸಬಹುದು. ಅದಕ್ಕೂ ಹೆಚ್ಚಿನ ತೂಕವಿದ್ದರೆ ದರ ಅನ್ವಯವಾಗಲಿದೆ ಎಂದರು.
ಹಿಂದೆ ಬಿಜೆಪಿ ಸರ್ಕಾರ ದರ ಹೆಚ್ಚಿಸಿದಾಗ ಅವರೇನು ಕೈಯಿಂದ ಕೊಟ್ಟಿರಲಿಲ್ಲ. ನಾವೂ ಕೈಯಿಂದ ಕೊಡುತ್ತಿಲ್ಲ. ಜನರ ತೆರಿಗೆ ಹಣ ತೆಗೆದು ಮರಳಿ ಜನರಿಗೇ ಕೊಡುತ್ತೇವೆ ಎಂದರು.