ಮಡಿಕೇರಿ: ದುಬಾರೆ ಸಾಕಾನೆ ಶಿಬಿರದಲ್ಲಿ ಸೋಮವಾರ ಕಂಜನ್ ಎಂಬ ಆನೆ ಜತೆ ಕಾದಾಟ ನಡೆಸಿದ್ದ ಮಾರ್ತಾಂಡ ಎಂಬ ಆನೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದೆ.
ನಿನ್ನೆ ಮಧ್ಯಾಹ್ನ ದುಬಾರೆ ಶಿಬಿರದ ಮಾರ್ತಾಂಡ ಮತ್ತು ಕಂಜನ್ ಆನೆಗಳ ನಡುವೆ ಅನಿರೀಕ್ಷಿತವಾಗಿ ಕಾದಾಟ ಆರಂಭವಾಗಿತ್ತು. ಈ ಕಾದಾಟಕ್ಕೆ ಸಿಲುಕಿ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಜಿನ್ನು ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಪ್ರವಾಸಿ ಮಹಿಳೆಯ ಸಾವಿನ ಬೆನ್ನಲ್ಲೇ ಮಾರ್ತಾಂಡ ಆನೆಯೂ ಸಾವನ್ನಪ್ಪಿದೆ.
ಕಾದಾಟದಲ್ಲಿ ಕಂಜನ್ ಆನೆಯು ತನ್ನ ದಂತಗಳಿಂದ ಮಾರ್ತಾಂಡನ ಹೊಟ್ಟೆ, ಕಿವಿಯ ಹಿಂಭಾಗ ಹಾಗೂ ಕಾಲುಗಳಿಗೆ ಆಳವಾಗಿ ಚುಚ್ಚಿತ್ತು. ಇದರಿಂದಾಗಿ ಮಾರ್ತಾಂಡನಿಗೆ ಗಂಭೀರ ಗಾಯಗಳಾಗಿದ್ದವು. ಪಶುವೈದ್ಯರಾದ ಡಾ. ಮುಜೀಬ್ ನೇತೃತ್ವದ ತಂಡ ಇಡೀ ರಾತ್ರಿ ಮಾರ್ತಾಂಡನಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸಲು ಹರಸಾಹಸ ಪಟ್ಟಿತ್ತು. ಆದರೆ, ಗಾಯಗಳು ಅತ್ಯಂತ ಆಳವಾಗಿದ್ದರಿಂದ ಮತ್ತು ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದ ಮಾರ್ತಾಂಡ ಮೃತಪಟ್ಟಿದ್ದಾನೆ.
ಮಾರ್ತಾಂಡನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಾವುತ ಮತ್ತು ಇತರ ಸಿಬ್ಬಂದಿ ತೀವ್ರ ದು:ಖ ವ್ಯಕ್ತಪಡಿಸಿದ್ದಾರೆ.