ನೋಯ್ತಾ: ಮಾಜಿ ಗೆಳತಿ ಮತ್ತು ಆಕೆಯ ಪತಿ ಸೇರಿ ಹಲ್ಲೆ ನಡೆಸಿ ಕೊಠಡಿಯಲ್ಲಿ ಕೂಡಿ ಹಾಕಿದ್ದು, ಅಲ್ಲಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬರು ಮೂರನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾರೆ. ನೋಯ್ತಾದ ಸೆಕ್ಟರ್ 120ರಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮೊಹಮ್ಮದ್ ತನ್ನೀರ್ ಎಂದು ಗುರುತಿಸಲಾಗಿದೆ.
ತನ್ನೀರ್ ಅವರು ಚಂಚಲ್ ರಾಣಾ ಎಂಬಾಕೆಯೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದರು. ಚಂಚಲ್ ಮದುವೆಯಾದ ನಂತರವೂ ತನ್ನೀರ್ ಆಕೆಯೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇದು ಚಂಚಲ್ ಮತ್ತು ಆಕೆಯ ಪತಿಯ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಚಂಚಲ್ ಮತ್ತು ಆಕೆಯ ಪತಿ ಸೇರಿ ತನ್ನೀರ್ ಅವರನ್ನು ತಮ್ಮ ಫ್ಯಾಟ್ಗೆ ಕರೆಸಿಕೊಂಡು, ಅಲ್ಲಿ ಅವರನ್ನ ಒತ್ತೆಯಾಳಾಗಿ ಇರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ತನ್ನೀರ್, ಕಟ್ಟಡದ 3ನೇ ಮಹಡಿಯ ಬಾಲ್ಕನಿಯಿಂದ ಕೆಳಕ್ಕೆ ಜಿಗಿದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರೊಂದಿಗೆ ಇದ್ದ ಮಹಿಳಾ ಸ್ನೇಹಿತೆ ಕೂಡ ಜಿಗಿದಿದ್ದು, ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಚಂಚಲ್ ರಾಣಾ ಮತ್ತು ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯೊಳಗೆ ಗಲಾಟೆ ನಡೆದಿದ್ದರಿಂದ ಗಾಬರಿಗೊಂಡು ಅವರು ಕೆಳಕ್ಕೆ ಜಿಗಿದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕ್ಷಮೆ ಕೇಳಲು ಹೋಗಿದ್ದ ಮಾಜಿ ಗೆಳೆಯ: ಮೃತ ವ್ಯಕ್ತಿಯು ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಮಾಜಿ ಗೆಳತಿ ಚಂಚಲ್ ರಾಣಾಳ ಪತಿ ಹಿತೇಶ್ ರಾಣಾ ಬಳಿ ಕ್ಷಮೆ ಕೇಳಲು ಆ ಮನೆಗೆ ಹೋಗಿದ್ದರು. ಚಂಚಲ್ ಮದುವೆಯಾದ ಮೇಲೂ ಈ ವ್ಯಕ್ತಿ ಆಕೆಯೊಂದಿಗೆ ಸಂಪರ್ಕದಲ್ಲಿದ್ದರು. ಇದರಿಂದ ಚಂಚಲ್ ಮತ್ತು ಹಿತೇಶ್ ನಡುವೆ ಮನೆಯಲ್ಲಿ ಗಲಾಟೆಗಳು ನಡೆಯುತ್ತಿದ್ದವು. ಈ ಸಮಸ್ಯೆಯನ್ನು ಬಗೆಹರಿಸಲು ವ್ಯಕ್ತಿ ಅಲ್ಲಿಗೆ ಹೋಗಿದ್ದರು. ಸಂಧಾನದ ವೇಳೆ ಮಾತಿಗೆ ಮಾತು ಬೆಳೆದು, ಹಿತೇಶ್ ಮತ್ತು ಚಂಚಲ್ ಸೇರಿ ಬಂದಿದ್ದ ಇಬ್ಬರ ಮೇಲೆ ಹಾಕಿ ಸ್ಟಿಕ್ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ನಂತರ ಇಬ್ಬರನ್ನೂ ಮೂರನೇ ಮಹಡಿಯ ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿತ್ತು ಎನ್ನಲಾಗಿದೆ.