ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಿರುಪತ್ತೂರ್ ವಿಧಾನಸಭಾ ಕ್ಷೇತ್ರದಿಂದ ಕೇವಲ ಒಂದು ಮತದಿಂದ ವಿಜಯಶಾಲಿಯಾಗಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಆರ್. ಶ್ರೀನಿವಾಸ ಸೇತುಪತಿ ಅವರಿಗೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಚಲಾಯಿಸುವುದಕ್ಕೆ ಮದ್ರಾಸ್ ಹೈಕೋರ್ಟ್ ಇಂದು ತಡೆ ನೀಡಿದೆ.
ಇವರ ವಿರುದ್ಧ ಸೋತಿದ್ದ ಡಿಎಂಕೆ ಅಭ್ಯರ್ಥಿ ಕೆ.ಆರ್. ಪೆರಿಯಕರುಪ್ಪನ್ ಸಲ್ಲಿಸಿದ್ದ ಅರ್ಜಿ ಪರಿಗಣಿಸಿರುವ ನ್ಯಾಯಮೂರ್ತಿಗಳಾದ ಎಲ್. ವಿಕ್ಟೋರಿಯಾ ಗೌರಿ ಮತ್ತು ಎನ್. ಸೆಂಥಿಲ್ ಕುಮಾರ್ ಅವರನ್ನೊಳಗೊಂಡ ರಜಾಕಾಲದ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದೆ.
ತಿರುಪತ್ತೂರ್ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಪೆರಿಯಕರುಪ್ಪನ್, ಮರು ಮತ ಎಣಿಕೆ ನಡೆಸುವಂತೆ ಅರ್ಜಿ ಸಲ್ಲಿಸಿ ಸೇತುಪತಿ ಅವರ ಪ್ರಮಾಣವಚನಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ. ಸೇತುಪತಿ 83,365 ಮತಗಳನ್ನು ಗಳಿಸಿದ್ದರೆ ಪೆರಿಯಕರುಪ್ಪನ್ 83,364 ಮತಗಳನ್ನು ಪಡೆದಿದ್ದಾರೆ.
ಮೇ 10ರಂದು ತಮಿಳಿನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವಿಜಯ್, ಬುಧವಾರ ಸದನದಲ್ಲಿ ಬಹುಮತ ಸಾಬೀತು ಮಾಡಬೇಕಿದೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದಿತ್ತು. ಈ ಪಕ್ಷದ ಮುಖ್ಯಸ್ಥ ಜೋಸೆಫ್ ವಿಜಯ್ ಕಾಂಗ್ರೆಸ್, ವಿಸಿಕೆ, ಐಯುಎಂಎಲ್, ಸಿಪಿಐ ಹಾಗೂ ಸಿಪಿಎಂ ಬೆಂಬಲದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿದ್ದಾರೆ.