ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಹಿಟ್ ಆಂಡ್ ರನ್ ಪಕರಣ ನಡೆದಿದ್ದು, 6 ವರ್ಷದ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ. ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದಲ್ಲಿ ತನ್ನ ಅಜ್ಜಿಯೊಂದಿಗೆ ಪ್ರಯಾಣಿಸುತ್ತಿದ್ದ ಇ-ರಿಕ್ಷಾಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯ ಸಾವಾಗಿದೆ.
ಇ-ರಿಕ್ಷಾಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದು ಮಗು ತೀವ್ರವಾಗಿ ಗಾಯಗೊಂಡಿದೆ. ಸಹಾಯಕ್ಕಾಗಿ ಅಜ್ಜಿ ಕೂಗಾಡಿಕೊಂಡು ಸ್ಥಳೀಯರಲ್ಲಿ ಬೇಡಿಕೊಂಡರೂ ಕೂಡಾ ಯಾರೂ ಕೂಡಾ ತಕ್ಷಣ ಸಹಾಯಕ್ಕೆ ಮುಂದೆ ಬರಲಿಲ್ಲ. ನಂತರ ಬಾಲಕಿಯನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಮೊಮ್ಮಗಳ ಸಾವನ್ನು ಕಣ್ಣಾರೆ ಕಂಡ ಅಜ್ಜಿ ಅಪಘಾತದ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ. ಮಗುವಿನ ಅಜ್ಜಿ, 57 ವರ್ಷದ ಮರ್ಸಿ ಕ್ಷೇವಿಯರ್, ವೇಗವಾಗಿ ಚಲಿಸುತ್ತಿದ್ದ ಕಾರು ಇದ್ದಕ್ಕಿದ್ದಂತೆ ಅವರ ಇ-ರಿಕ್ಷಾಗೆ ಹೇಗೆ ಡಿಕ್ಕಿ ಹೊಡೆದಿದೆ ಎಂದು ವಿವರಿಸಿದ್ದಾರೆ. ಏನಾಗುತ್ತಿದೆ ಎಂದು ಅರ್ಥವಾಗುವ ಮೊದಲೇ ತಾವು ರಸ್ತೆಗೆ ಬಿದ್ದಿದ್ದೆವು ಎಂದು ಅವರು ಘಟನೆಯನ್ನು ನೆನಪಿಸಿಕೊಂಡಿದ್ದಾರೆ.ನಾನು ನನ್ನ ಮೊಮ್ಮಗಳೊಂದಿಗೆ ಇ-ರಿಕ್ಷಾ ಹತ್ತಿದ್ದೆ, ಮತ್ತು ನಾವು ಅವಳ ಶಾಲೆಗೆ ಹೋಗುತ್ತಿದ್ದೆವು. ಅದು ಸಾಮಾನ್ಯ ಬೆಳಿಗ್ಗೆ. ಇದ್ದಕ್ಕಿದ್ದಂತೆ, ವೇಗವಾಗಿ ಬಂದ ಕಾರು ನಮ್ಮ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಏನಾಯಿತು ಎಂದು ನನಗೆ ಅರ್ಥವಾಗುವ ಮೊದಲೇ, ನಾನು ರಸ್ತೆಗೆ ಬಿದ್ದಿದ್ದೆ. ನಾನು ಕಣ್ಣು ತೆರೆದು ನೋಡಿದಾಗ ರಸ್ತೆ ಮೇಲೆ ಮಲಗಿದ್ದೆ. ನನ್ನ ಮೊಮ್ಮಗಳು ನನ್ನ ಪಕ್ಕದಲ್ಲಿ ಮಲಗಿದ್ದಳು. ನನ್ನ ಕೈ ರಕ್ತದಲ್ಲಿ ತೊಯ್ದಿತ್ತು. ನಾನು ಆಘಾತ ಮತ್ತು ನೋವಿನಿಂದ ಬಳಲುತ್ತಿದ್ದೆ. ಆದರೂ ನನಗೆ ಮೊಮ್ಮಗಳ ಚಿಂತೆಯೇ ಇತ್ತು.
ತಕ್ಷಣ ನಾನು ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಹತ್ತಿರದ ಕಾರು ಚಾಲಕನಲ್ಲಿ ಬೇಡಿಕೊಂಡೆ. ಅವರು ನಮ್ಮನ್ನೇ ನೋಡುತ್ತಿದ್ದರು. ಆದರೆ ಅವರು ನಮಗೆ ಸಹಾಯ ಮಾಡುವ ಬದಲು ಅಲ್ಲಿಂದ ಓಡಿ ಹೋದರು. ನಮಗೆ ಡಿಕ್ಕಿ ಹೊಡೆದ ಕಾರು ಅದೆಯೇ ಎಂದುಬು ನನಗೆ ನೆನಪಿಲ್ಲ ಎಂದು ಅವರು ಹೇಳಿದ್ದಾರೆ.ಇನ್ನು ಘಟನೆ ಸಂಬಂಧ ಜನಕಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮತ್ತು ಆರೋಪಿ ಚಾಲಕನನ್ನು ಸಂಜೀವ್ ಎಂದು ಗುರುತಿಸಲಾಗಿದ್ದು ಆತನನ್ನು ಬಂಧಿಸಲಾಗಿದೆ.