ತಿರುವನಂತಪುರ; ಕೇರಳಂನಲ್ಲಿ ಯುಡಿಎಫ್ ಅಧಿಕಾರ ರಚಿಸಲು ಸಜ್ಜಗಹಿರುವ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಮೂವರು ತ್ರಿಮೂರ್ತಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಎಲ್ ಡಿಎಫ್ ಸರ್ಕಾರ ಇದ್ದಾಗ ಪ್ರತಿಪಕ್ಷ ನಾಯಕರಾಗಿದ್ದ ವಿ.ಡಿ. ಸತೀಶನ್, ಹಿರಿಯ ಮುಖಂಡ ರಮೇಶ್ ಚೆನ್ನಿತ್ತಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಂಸದ ಕೆ.ಸಿ. ವೇಣುಗೋಪಾಲ್ ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮುಖವಾಗಿ ಕೇಳಿಬರುತ್ತಿವೆ. ಮೂವರೂ ಅರ್ಹತೆ ಪಡೆದಿದ್ದರೂ ಹೈಕಮಾಂಡ್ ಒಲವು ಯಾರ ಕಡೆಗೆ ಎಂಬ ಗುಟ್ಟು ರಟ್ಟಾಗಿಲ್ಲ.
ಒಂದು ಕಡೆ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದನ್ನು ನಿರ್ಧರಿಸಲು ಯುಡಿಎಫ್ ಮುಖಂಡರು ಕಸರತ್ತು ನಡೆಸಿದ್ದಾರೆ.
ದಶಕಗಳ ನಂತರ ಯುಡಿಎಫ್ ಆಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದೆ. ಕಾಂಗ್ರೆಸ್ 63 ಸ್ಥಾನಗಳನ್ನು ಗೆದ್ದಿದ್ದು, ಮಿತ್ರಪಕ್ಷಗಳು ಒತ್ತಡ ಹೇರಿಇವ ಸ್ಥಿತಿಯಲ್ಲಿಲ್ಲ.
ಹೈಕಮಾಂಡ್ ಈಗಾಗಲೇ ಚರ್ಚೆಯನ್ನು ಆರಂಭಿಸಿದೆಯಾದರೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ದಶಕಗಳ ನಂತರ ಅಧಿಕಾಋ ಹಿಡಿದಿದ್ದು, ಸಿಎಂ ಆಯ್ಕೆಯೂ ಅಷ್ಟೇ ಸಮತೋಲಿತವಾಗಿರಬೇಕು ಎಂದು ಹಿರಿಯ ಮುಖಂಡರು ಸಲಹೆ ನೀಡಿದ್ದಾರೆ.
ಸಿಎಂ ಆಯ್ಕೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕೇರಳಂ ಉಸ್ತುವಾರಿ ದೀಪಾ ದಾಸ್ ಮುನ್ಶಿ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಮೂವರೂ ಆಕಾಂಕ್ಷಿಗಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದೆ.
ಮಿತ್ರಪಕ್ಷ ಐಯುಎಂಲ್ ಮತ್ತಿತರ ಮಿತ್ರ ಪಕ್ಷಗಳ ಅಭಿಪ್ರಾಯವನ್ನೂ ಪರಿಗಣಿಸಲಿದೆ. ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷವು ಸಭೆ ಸೇರಿ, ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದರ ಬಗ್ಗೆ ಒಂದು ಸಾಲಿನ ನಿರ್ಣಯವನ್ನು ಅಂಗೀಕರಿಸಲಿದೆ.