ಬೆಂಗಳೂರು: ಮುಂಬರುವ_ಬಜೆಟ್ ನಲ್ಲಿ ಕನ್ನಡ, ಕನ್ನಡಿಗ ಕರ್ನಾಕಟದ ಏಳಿಗೆಗೆ ಪೂರಕವಾಗುವಂತೆ ಅನುದಾನ ನೀಡಿ ಕನ್ನಡ ಬಜೆಟ್ ಮಂಡಿಸುವಂತೆ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸರ್ಕಾರದ ಮುಂದೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟರು.
ಮನವಿಯ ಪ್ರಮುಖ ಅಂಶಗಳು:
ಕನ್ನಡ ಮಾಧ್ಯಮದಲ್ಲಿ 1 ರಿಂದ 10ನೇ ತರಗತಿವರೆಗೆ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ /ಪ್ರಥಮ ಪ್ರಾಶಸ್ತ್ಯದಲ್ಲಿ ನೇಮಕಾತಿ ಮಾಡಿಕೊಳ್ಳಬೇಕು. 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡಿದವರಿಗೆ ಉನ್ನತ ವ್ಯಾಸಂಗದಲ್ಲಿ ಕಾಲೇಜುಗಳಲ್ಲಿ ಶೇ 25 ಮೀಸಲಾತಿ ನೀಡಬೇಕು.
ಇ -ಆಡಳಿತದಲ್ಲಿ ಸಂಪೂರ್ಣ ಕನ್ನಡ ನುಡಿ ಜಾರಿಗೆ ತರಲು ಸರ್ಕಾರದ ಅಧಿಕಾರಿಗಳಿಗೆ / ನೌಕರರಿಗೆ ತರಬೇತಿ ನೀಡುವುದು; ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೇರ್ಪಡಿಸಿ ಸಂಪೂರ್ಣ ಸ್ವಾಯತ್ತತೆಯನ್ನು ನೀಡಬೇಕು. ಜೊತೆಗೆ 1000 ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಐ ಟಿ ಕಂಪೆನಿಗಳಲ್ಲಿ ಕಡ್ಡಾಯವಾಗಿ ಕನ್ನಡಿಗರಿಗೆ 25 ಶೇ ಉದ್ಯೋಗ ಮೀಸಲಾತಿ ನೀಡಬೇಕು. ಕರ್ನಾಟಕದ ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕು, ವಿಶೇಷ ಪ್ರವಾಸಗಳನ್ನು ಇಲಾಖೆಯಿಂದ ಏರ್ಪಡಿಸಬೇಕು ಎಂದೂ ಕೋರಿದ್ದಾರೆ.
ಕನ್ನಡ ಕನ್ನಡಿಗ ಕರ್ನಾಟಕ ಸಮಗ್ರ ಇತಿಹಾಸ, ವಾಸ್ತು ಶಿಲ್ಪ, ಸಾಹಿತ್ಯ, ಸಂಗೀತದ ಥೀಮ್ ಪಾರ್ಕ್ ಮಾಡಬೇಕು. ಕರ್ನಾಟಕ ಸಂಗೀತಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು. ಕನ್ನಡ ಚಳವಳಿ, ಗೋಕಾಕ್ ಚಳವಳಿ, ರೈತ ಚಳವಳಿ, ದಲಿತ ಚಳವಳಿಯ ಥೀಮ್ ಪಾರ್ಕ್ ಮಾಡಬೇಕು. ಕನ್ನಡ ಸಂಘಟನೆಗಳಿಗೆ ವಿಶೇಷ ಅನುದಾನ ನೀಡಬೇಕು.
ಗಡಿನಾಡು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಶಿಕ್ಷಕರ ನೇಮಕಾತಿ ಮಾಡಬೇಕು. ಕನ್ನಡ ಮಾಧ್ಯಮದಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದವರಿಗೆ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ನೀಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.