ಭಾರತೀಯ ರಾಷ್ಟ್ರ ಪಕ್ಷವು ಎಂಎಲ್ಸಿ ಆದ ಕೆ. ಕವಿತಾರನ್ನು ಅಮಾನತುಗೊಳಿತ್ತು. ಅವರ ಇತ್ತೀಚಿನ ನಡವಳಿಕೆಗಳು ಸರಿಯಿಲ್ಲ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಅರೋಪದಡಿ ಸ್ವತಃ ಕವಿತಾ ಅವರ ತಂದೆ ಹಾಗೂ ಪಕ್ಷದ ಅಧ್ಯಕ್ಷರಾಗಿರುವ ಕೆ.ಚಂದ್ರಶೇಖರ್ ರಾವ್ ಅವರೇ ಅಮಾನತುಗೊಳಿಸಿದ್ದರು. ಅಮಾನತುಗೊಂಡ ನಂತರವೇ ಕವಿತಾರವರು ಇದೀಗ ಹೊಸ ರಾಜಕೀಯ ಪಕ್ಷವನ್ನು ಕಟ್ಟಿದ್ದಾರೆ.
ಈ ಹಿಂದೆ ಬಿಆರ್ಎಸ್ ಪಕ್ಷದಲ್ಲಿ ಪ್ರಮುಖ ನಾಯಕಿಯಾಗಿ ಗುರುತಿಸಿಕೊಂಡಿದ್ದ ಕವಿತಾರವರು ನಿಜಾಮಾಬಾದ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದ್ರೆ ಅಮಾನತು ಬಳಿಕ ಹೈದಾರಬಾದ್ನಲ್ಲಿ ತಮ್ಮ ನೂತನ ರಾಜಕೀಯ ಪಕ್ಷವನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ತಮ್ಮ ಹೊಸ ಪಕ್ಷಕ್ಕೆ ಟಿಆರ್ಎಸ್ ಎಂದು ಹೆಸರಿಟ್ಟಿದ್ದಾರೆ. ಟಿಆರ್ಎಸ್ ಎಂದರೆ ತೆಲಂಗಾಣ ರಾಷ್ಟ್ರ ಸೇನಾ ಎಂದು ಕವಿತಾ ತಿಳಿಸಿದ್ದಾರೆ.
ಹೊಸ ಪಕ್ಷ ಸ್ಥಾಪಿಸಿರುವ ಕವಿತಾ ರವರು ತಮ್ಮ ತಂದೆ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ತೆಲಂಗಾಣದ ಮೂಲ ಆಶಯಗಳನ್ನು ಬಿಆರ್ಎಸ್ ಮರೆತಿದೆ. ನಮ್ಮ ಈ ಹೋರಾಟವು ಕೇವಲ ರಾಜಕೀಯವಲ್ಲ, ತೆಲಂಗಾಣದ ಸ್ವಾಭಿಮಾನಕ್ಕಾಗಿ ರಚಿಸಿದ್ದು ಎಂದು ಕವಿತಾ ಬಣ್ಣಿಸಿದ್ದಾರೆ. ತಮ್ಮ ಪಕ್ಷವು ತೆಲಂಗಾಣದ ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ವೇದಿಕೆಯಾಗಲಿದೆ ಎಂದು ಕವಿತಾ ಹೇಳಿದ್ದಾರೆ.