ಹೈದರಾಬಾದ್: ತೆಲಂಗಾಣ ಜಾಗೃತಿ ಅಧ್ಯಕ್ಷೆ .ಕವಿತಾ ಅವರು ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ. ಮೇ ತಿಂಗಳಲ್ಲಿ ಹೊಸ ಪಕ್ಷದ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಪಕ್ಷದ ಹೆಸರಿನಲ್ಲಿ 'ತೆಲಂಗಾಣ' ಹೆಸರು ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.
ತೆಲಂಗಾಣ ನಮ್ಮ ಮಾತೃ ಮಂಡಲಿ, ಸಾಮಾಜಿಕ ತೆಲಂಗಾಣ ನಮ್ಮ ಗುರಿ. ರಾಜ್ಯದ ಜನರ ಆಶಯಗಳಿಗೆ ಅನುಗುಣವಾಗಿ ಪಕ್ಷವನ್ನು ಮುನ್ನೆಡೆಸುವುದಾಗಿ ಅವರು ತಿಳಿಸಿದ್ದಾರೆ.
ಮಾಜಿ ಸಂಸದೆ, ಮಾಜಿ ವಿಧಾನಪರಿಷತ್ ಸದಸ್ಯೆಯೂ ಆಗಿರುವ ಅವರು, ಮುಂಬರುವ ಚುನಾವನೆಯಲ್ಲಿ ಸಿದ್ದಿಪೇಟೆ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಮತ್ತು ಬೊಧಾನ್ ಕ್ಷೇತ್ರದಿಂದಲೂ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.
ನಮ್ಮ ಪಕ್ಷ ಅಸಿತ್ವಕ್ಕೆ ಬಂದ ನಂತರ ರಾಜ್ಯದಲ್ಲಿ ಬಿಜೆಪಿ ಕಣ್ಮರೆಯಾಗುತ್ತದೆ ಮತ್ತು ನಮ್ಮ ಪಕ್ಷ ಕಾಂಗ್ರೆಸ್, ಬಿಆರ್ ಎಸ್ ಪಕ್ಷಗಳನ್ನು ನಿರಂತರವಾಗಿ ಪ್ರಶ್ನಿಸಲಿದೆ. ಜತೆಗೆ MPTC, ZPTC ಮತ್ತು GHMC ಚುನಾವಣೆಗಳಲ್ಲೂ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಬಿಆರ್ ಎಸ್ ಪಕ್ಷದ ಅನೇಕ ಮುಖಂಡರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದೂ ಅವರು ಉತ್ತರಿಸಿದ್ದಾರೆ.
ವೈಎಸ್ ಶರ್ಮಿಳಾ ಅವರು ತಮ್ಮ ವೈಎಸ್ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸಿದ್ದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕವಿತಾ ಅವರು, ಶರ್ಮಿಳಾ ವಿಫಲ ನಾಯಕಿಯಲ್ಲ. ಈಗ ಅವರು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷರು. ರಾಜಕೀಯ ಪಕ್ಷಗಳನ್ನು ಪ್ರಾರಂಭಿಸಿದ ನಂತರ ವಿಫಲರಾದ ಪುರುಷ ನಾಯಕರ ಬಗ್ಗೆನೀವು ಏಕೆ ಪ್ರಶ್ನಿಸುವುದಿಲ್ಲ ಎಂದು ಮರುಪ್ರಶ್ನೆ ಹಾಕಿದರು.