ದೊಡ್ಡಬಳ್ಳಾಪುರ: ತಾಲೂಕಿನ ಎಸ್. ನಾಗೇನಹಳ್ಳಿ ಗ್ರಾಮದಲ್ಲಿ ಹಾಡಹಗಲೇ ಕಳ್ಳರು ಕೈಚಳಕ ತೋರಿಸಿದ್ದು, ಮನೆಯ ಬೀಗ ಒಡೆದು ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ವರದಿಯಾಗಿದೆ. ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯವನ್ನು ಹೊಂಚು ಹಾಕಿದ್ದ ಖದೀಮರು, ಮನೆಯ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ.
ಮನೆಯಲ್ಲಿದ್ದ ಸುಮಾರು 10ಗ್ರಾಂ ತೂಕದ ಚಿನ್ನದ ಚೈನ್, ತಲಾ 15 ಗ್ರಾಂ ತೂಕದ ಎರಡು ಬ್ರೇಸ್ಸೆಟ್ಗಳು ಮತ್ತು ನೆಕ್ಸಸ್ ಅನ್ನು ದೋಚಿದ್ದಾರೆ. ಇಷ್ಟೇ ಅಲ್ಲದೆ, 8 ಗ್ರಾಂ ತೂಕದ ಉಂಗುರ, ಮೂರು ಜೋಡಿ ಬೆಳ್ಳಿ ಕಾಲುಗೆಜ್ಜೆ ಹಾಗೂ ಮನೆಯಲ್ಲಿದ್ದ 1 ಲಕ್ಷ 30 ಸಾವಿರ ರೂಪಾಯಿ ನಗದನ್ನು ಕೂಡ ಕಳ್ಳರು ಅಪಹರಿಸಿಕೊಂಡು ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳತನ ಮಾಡಿ ಎಸ್ಕೆಪ್ ಆಗಿರುವ ಖದೀಮರಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಜನವಸತಿ ಪ್ರದೇಶದಲ್ಲೇ ಹಾಡಹಗಲೇ ಇಂತಹ ಕಳ್ಳತನ ನಡೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.