ಜೆರುಸಲೇಮ್: ಇರಾನ್ ಮೇಲೆ ಮುನ್ನೆಚ್ಚರಿಕೆಯ ದಾಳಿ ನಡೆಸಿರುವ ಇಸ್ರೇಲ್, ಮುಂಜಾಗ್ರತಾ ಕ್ರಮವಾಗಿ ದೇಶದಲ್ಲಿ ಗುಪ್ತಚರ ನೆಲೆಗಳು ಘೋಷಿಸಿದೆ. ಇಸ್ರೇಲ್ಗೆ ಬೆದರಿಕೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇರಾನ್ ಮೇಲೆ ದಾಳಿ ಮಾಡಿರುವುದಾಗಿ ಅಲ್ಲಿನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.
ದಾಳಿ ಆರಂಭಕ್ಕೂ ಮೊದಲು ದೇಶದಲ್ಲಿ ಸೈರನ್ ಮೊಳಗಿಸಲಾಗಿದೆ. ದೇಶದ ನಾಗರಿಕರು ಬಾಂಬ್ ಶೆಲ್ಟರ್ಗಳ ಬಳಿಯೇ ಇರುವಂತೆ ಹಾಗೂ ಅನಗತ್ಯವಾಗಿ ಓಡಾಡದಂತೆ ಇಸ್ರೇಲ್ ಸೇನೆಯ ಅಧಿಕಾರಿಗಳು ದೇಶದ ನಾಗರಿಕರಿಗೆ ಸೂಚನೆ ನೀಡಿದ್ದಾರೆ.
ದೇಶದತ್ತ ಕ್ಷಿಪಣಿಗಳು ಹಾರಿಬರುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮವಾಗಿ ನಾಗರಿಕರನ್ನು ಸನ್ನದ್ಧಗೊಳಿಸುವ ಪ್ರಕ್ರಿಯೆ ಇದಾಗಿದೆ. ಸದ್ಯಕ್ಕೆ ಆಶ್ರಯ ತಾಣಗಳಿಗೆ ತೆರಳುವ ಅಗತ್ಯವಿಲ್ಲ. ಆದರೆ ಅದರ ಸಮೀಪವೇ ಇರುವುದು ಕ್ಷೇಮ ಎಂದು ಸೇನೆ ತಿಳಿಸಿದೆ.
ಇದೇ ಸಂದರ್ಭದಲ್ಲಿ ಟೆಲ್ ಅವೀವ್ನಿಂದ ದೆಹಲಿಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದ ಏರ್ ಇಂಡಿಯಾ ವಿಮಾನ ಎಐ 140 ಏರಲು ಸಿದ್ಧರಾಗುತ್ತಿದ್ದ ಪ್ರಯಾಣಿಕರು ತಮ್ಮ ವಸ್ತುಗಳನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು, ಬಾಂಬ್ ಶೆಲ್ಟರ್ಗಳಿಗೆ ದೌಡಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲವನ್ನೂ ಮರೆತುಬಿಡಿ, ತಕ್ಷಣ ಬಾಂಬ್ ಶೆಲ್ಟರ್ಗೆ ತೆರಳಿ ಎಂಬ ಸೂಚನೆ ಬಂತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಭಾರತ ಮೂಲದ ವಿಮಾನಯಾನ ಸಂಸ್ಥೆಯು ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಒಂದು ವಾರ ತನ್ನ ಹಾರಾಟವನ್ನು ಸ್ಥಗಿತಗೊಳಿಸಿದೆ. ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದರಿಂದ ಟೆಹರಾನ್ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ ಎಂದೂ ಹೇಳಲಾಗುತ್ತಿದೆ.
ಇಸ್ರೇಲ್ ಕ್ಷಿಪಣಿ ದಾಳಿಗೆ ಇರಾನ್ ರಾಜಧಾನಿ ಟೆಹ್ರಾನ್ ತತ್ತರಿಸಿದೆ. 30 ನಿರ್ದಿಷ್ಟ ಗುರಿಗಳ ಮೇಲೆ ದಾಳಿ ನಡೆಸಲಾಗಿದ್ದು ಇದರಲ್ಲಿ ಗುಪ್ತಚರ ನೆಲೆಗಳು ಮತ್ತು ಅಧ್ಯಕ್ಷ ಖಮೇನಿ ನಿವಾಸವೂ ಸೇರಿದೆ. ಖಮೇನಿ ಸುರಕ್ಷಿತ ಸ್ಥಳಕ್ಕೆ ಪರಾರಿಯಾಗಿದ್ದಾರೆ ಎಂದೂ ತಿಳಿದು ಬಂದಿದೆ.