ಘೋಷಿತ ಕದನ ವಿರಾಮವನ್ನು ಉಲ್ಲಂಘಿಸಿ ಇಸ್ರೇಲ್ ಪಡೆಗಳು ಲೆಬನಾನ್ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದ್ದು, ಇದಕ್ಕೆ ಪ್ರತೀಕಾರವಾಗಿ ಇರಾನ್ ತಕ್ಷಣವೇ ಹಾರ್ಮುಜ್ ಜಲಸಂಧಿ ಮಾರ್ಗವನ್ನು ಬಂದ್ ಮಾಡಿದೆ. ಪೂರ್ವ ಸೂಚನೆ ಇಲ್ಲದೆ ನಡೆದ ಈ ದಾಳಿಯಲ್ಲಿ ಶಾಲೆ, ಆಸ್ಪತ್ರೆ ಮತ್ತು ವಸತಿ ಪ್ರದೇಶಗಳು ಗುರಿಯಾಗಿದ್ದು, ಸುಮಾರು 300 ಜನರು ಸಾವನ್ನಪ್ಪಿದ್ದಾರೆ ಮತ್ತು 1200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದದಂತೆ ಹಾರ್ಮುಜ್ ಮಾರ್ಗ ಮುಕ್ತವಾಗಿ ತೈಲ ಪೂರೈಕೆ ಸುಗಮವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಇಸ್ರೇಲ್ನ ಈ ದಾಳಿ ದೊಡ್ಡ ಹೊಡೆತ ನೀಡಿದೆ.
ಹಾರ್ಮುಜ್ ಜಲಸಂಧಿಯ ದಿಢೀರ್ ಮುಚ್ಚುವಿಕೆಯು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ್ದು, ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಈ ಮಾರ್ಗವನ್ನು ದಾಟಲು ಮುಂದಾಗಿದ್ದ ಹಡಗುಗಳನ್ನು ಇರಾನ್ ತಡೆಹಿಡಿದಿದ್ದು, ಇದರಿಂದಾಗಿ ಜಾಗತಿಕ ಸಾಗಣೆ ಕಂಪನಿಗಳು ಈಗ ಪರ್ಯಾಯ ಮತ್ತು ದೂರದ ನೌಕಾ ಮಾರ್ಗಗಳನ್ನು ಹುಡುಕುವ ಅನಿವಾರ್ಯತೆಗೆ ಸಿಲುಕಿವೆ. ತೈಲ ಆಮದನ್ನೇ ಅವಲಂಬಿಸಿರುವ ಭಾರತದಂತಹ ದೇಶಗಳ ಆರ್ಥಿಕತೆಯ ಮೇಲೆ ಇದು ತೀವ್ರ ಪರಿಣಾಮ ಬೀರಲಿದ್ದು, ಇನ್ಸೂರೆನ್ಸ್ ಪಾಲಿಸಿಗಳ ದರ ಏರಿಕೆ ಮತ್ತು ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.
ಮತ್ತೊಂದೆಡೆ, ದಾಳಿಗೊಳಗಾದ ಲೆಬನಾನ್ನಲ್ಲಿ ಮಾನವೀಯ ಬಿಕ್ಕಟ್ಟು ತಲೆದೋರಿದ್ದು, ನಾಗರಿಕರು ಆಹಾರ, ಇಂಧನ ಮತ್ತು ವೈದ್ಯಕೀಯ ಸೇವೆಗಳಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತರಾಷ್ಟ್ರೀಯ ಸಂಸ್ಥೆಗಳು ತುರ್ತು ನೆರವು ನೀಡಲು ಹರಸಾಹಸ ಪಡುತ್ತಿದ್ದರೂ, ಸೀಮಿತ ಸಂಪನ್ಮೂಲಗಳಿಂದಾಗಿ ಪರಿಸ್ಥಿತಿ ಕೈಮೀರುತ್ತಿದೆ. ಇರಾನ್ ಸರ್ಕಾರವು ತನ್ನ ಈ ನಿರ್ಧಾರವನ್ನು ಜಾಗತಿಕ ತೈಲ ಸಾಗಣೆ ಹಕ್ಕಿನ ರಕ್ಷಣೆ ಎಂದು ಸಮರ್ಥಿಸಿಕೊಂಡಿದ್ದು, ಇತ್ತೀಚಿನ ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡಗಳು ಕವಿಯುವಂತೆ ಮಾಡಿದೆ.