ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ವೀಕ್ಷಿಸುವ ಕನಸು ಕಾಣುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) (RCB) ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಆರ್ಸಿಬಿ ಮ್ಯಾನೇಜೆಂಟ್ನಿಂದಲೇ ಬೆಂಗಳೂರಿನಲ್ಲಿ ಪಂದ್ಯ ಆಯೋಜನೆ ಕುರಿತಂತೆ ಮಹತ್ವದ ಸುಳಿವು ಲಭ್ಯವಾಗಿದ್ದು, ಇಂದು ಅಥವಾ ನಾಳೆ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.
ಐಪಿಎಲ್ ಆರಂಭಕ್ಕೆ ಇನ್ನೂ ಸುಮಾರು ಎರಡು ತಿಂಗಳು ಮಾತ್ರ ಬಾಕಿ ಉಳಿದಿದ್ದರೂ, ಆರ್ಸಿಬಿ ತನ್ನ ತವರು ಮೈದಾನವನ್ನು ಇನ್ನೂ ಅಂತಿಮಗೊಳಿಸಿಲ್ಲ. ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಪಂದ್ಯಗಳನ್ನು ಆಡಲಾಗುತ್ತದೆ ಎಂಬ ಯಾವುದೇ ಅಧಿಕೃತ ಸೂಚನೆಯನ್ನು ಆರ್ಸಿಬಿ ನೀಡಿರಲಿಲ್ಲ. ಇದರ ನಡುವೆ, ಆರ್ಸಿಬಿ ಮತ್ತೆ ಬೆಂಗಳೂರಲ್ಲೇ ತವರು ಪಂದ್ಯಗಳನ್ನು ಆಡಬೇಕು ಎಂಬ ಅಭಿಮಾನಿಗಳ ಒತ್ತಡ ಹೆಚ್ಚಾಗಿತ್ತು.
ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಆಶಯಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಆರ್ಸಿಬಿ ಆಡಳಿತ ಮಂಡಳಿ ಪೂರಕ ಹೆಜ್ಜೆ ಇಟ್ಟಿರುವಂತೆ ಕಾಣುತ್ತಿದೆ. ಇತ್ತೀಚೆಗೆ ಕೆಎಸ್ಸಿಎ, ತವರು ಮೈದಾನ ಆಯ್ಕೆ ಸಂಪೂರ್ಣವಾಗಿ ಆರ್ಸಿಬಿ ಮ್ಯಾನೇಜೆಂಟ್ನ ನಿರ್ಧಾರ ಎಂದು ಸ್ಪಷ್ಟಪಡಿಸಿ, ಈ ವಿಚಾರದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಹೇಳಿತ್ತು. ಆದರೂ ಆರ್ಸಿಬಿ ಇದುವರೆಗೂ ತನ್ನ ತೀರ್ಮಾನವನ್ನು ಅಧಿಕೃತಗೊಳಿಸಿರಲಿಲ್ಲ.
ಇದೀಗ ಬಿಸಿಸಿಐ ತವರು ಮೈದಾನ ಘೋಷಣೆಗೆ ನಿಗದಿಪಡಿಸಿದ್ದ ಡೆಡ್ರೈನ್ ಕೂಡ ಮುಕ್ತಾಯಗೊಂಡಿದ್ದು, ಆರ್ಸಿಬಿಗೆ ತ್ವರಿತ ನಿರ್ಧಾರ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಡೆಡ್ರೈನ್ ವಿಸ್ತರಣೆಗೆ ಬಿಸಿಸಿಐಗೆ ಮನವಿ ಸಲ್ಲಿಸಿರುವ ಆರ್ಸಿಬಿ, ಬೆಂಗಳೂರಿನಲ್ಲಿ ಪಂದ್ಯ ಆಯೋಜನೆ ಕುರಿತು ರಾಜ್ಯ ಸರ್ಕಾರದೊಂದಿಗೆ ನೇರ ಚರ್ಚೆಗೆ ಮುಂದಾಗಿದೆ.
ಇಂದು ಅಥವಾ ನಾಳ ಸರ್ಕಾರದೊಂದಿಗೆ ಸಭೆ ನಡೆಸಿ, ಹಿಂದಿನ ದುರಂತದ ಬಳಿಕ ಉಂಟಾದ ಪರಿಸ್ಥಿತಿ, ಭದ್ರತೆ ಹಾಗೂ ಆಯೋಜನಾ ವಿಚಾರಗಳನ್ನು ಚರ್ಚಿಸಿ, ಬೆಂಗಳೂರಿನಲ್ಲಿ ಪಂದ್ಯ ಆಡಬೇಕೇ ಅಥವಾ ಬೇಡವೇ ಎಂಬ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಇದೇ ವೇಳೆ, ಕೆಎಸ್ಸಿಎ ಮತ್ತು ಪೊಲೀಸ್ ಇಲಾಖೆ ನಡುವೆ ಮತ್ತೊಂದು ಮಹತ್ವದ ಸಭೆ ನಡೆಯಲಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಖುನ್ನಾ ವರದಿ ಕುರಿತು ಮತ್ತೊಂದು ಹಂತದ ಪರಿಶೀಲನೆ ನಡೆಸಲಾಗುತ್ತದೆ. ಬಳಿಕ ಮುಂದಿನ ಕ್ರಮಗಳ ಬಗ್ಗೆ ಪೊಲೀಸ್ ಆಯುಕ್ತರು ಸೂಚನೆ ನೀಡಲಿದ್ದಾರೆ.
ಒಟ್ಟಾರೆ, ಇಂದು ಅಥವಾ ನಾಳೆಯೊಳಗೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯುವ ಕುರಿತಂತೆ ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. 18 ವರ್ಷಗಳಿಂದ ಅಭಿಮಾನಿಗಳು ನೀಡಿರುವ ಪ್ರೀತಿಗೆ ಪ್ರತಿಯಾಗಿ ಆರ್ಸಿಬಿ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯುತ್ತದೆಯೇ, ಅಥವಾ ದುರಂತದ ನೋವಿನ ನಡುವೆ ಬೇರೆ ತವರು ಮೈದಾನವನ್ನು ಆಯ್ಕೆ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.