ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವು ರೈತರು, ಜಾನುವಾರು ಮತ್ತು ಜವಳಿ ಕ್ಷೇತ್ರವನ್ನು ದುರ್ಬಲಗೊಳಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಪಾದಿಸಿದ್ದಾರೆ.
ಈ ಒಪ್ಪಂದ ಕೃಷಿ ಕ್ಷೇತ್ರಕ್ಕೂ ಆತಂಕ ಒಡ್ಡಲಿದೆ. ಜವಳಿ ಕ್ಷೇತ್ರದ ಬಗ್ಗೆ ಮಾತನಾಡಿದ ಖರ್ಗೆ, ಬಾಂಗ್ಲಾದೇಶಕ್ಕೆ ಅಮೆರಿಕದ ಹತ್ತಿ ಬಳಕೆಗೆ ಶೂನ್ಯ ಸುಂಕದ ಪ್ರವೇಶ ನೀಡಲಾಗಿದ್ದು, ಭಾರತಕ್ಕೆ ಮಾತ್ರ ಶೇ.18 ಸುಂಕ ವಿಧಿಸಿದೆ. ಇದು ತಿರುಪುರ್ ಮತ್ತು ಸೂರತ್ ನಂತಹ ದೇಶದ ಜವಳಿ ಕೇಂದ್ರಗಳಿಗೆ ದೊಡ್ಡ ಅನಾನುಕೂಲವನ್ನುಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಈ ಒಪ್ಪಂದವನ್ನು 'PRನಿಂದ ಮುಚ್ಚಿಟ್ಟ ದ್ರೋಹ' ಎಂದು ಕರೆದಿರುವ ಖರ್ಗೆ ಅವರು, ಇದು ನಿಜವಾಗಿಯೂ ಭಾರತದ ಕಾರ್ಯತಂತ್ರ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುತ್ತದೆಯೇ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅಮೆರಿಕವು ಹೆಚ್ಚುವರಿ ಶೇ.25ರಷ್ಟು ಸುಂಕವನ್ನು ತೆಗೆದುಹಾಕಲು, ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಬೇಕು ಎಂಬ ಷರತ್ತನ್ನು ವಿಧಿಸಿದೆ. ಕೇಂದ್ರ ಸರ್ಕಾರ ಇದನ್ನು ಒಪ್ಪಿಕೊಂಡಿದೆ. ಇದು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಒಪ್ಪಂದ ಎಂದು ಅವರು ಕಿಡಿಕಾರಿದ್ದಾರೆ.