ಬೆಂಗಳೂರು: ಭಾರತವನ್ನು ಜಗತ್ತು ಗುರುತಿಸುವುದು ಗಾಂಧಿ, ಬುದ್ಧ, ಅಂಬೇಡ್ಕರ್, ನೆಹರುರವರಿಂದಲೇ ಹೊರತು ಸಾವರ್ಕರ್, ಗೋಡ್ಸೆಯಿಂದಲ್ಲ. ಈ ದೇಶ ಭವ್ಯ ಭಾರತವಾಗಿ ಗುರುತಿಸಿಕೊಂಡು ದಶಕಗಳು ಕಳೆದಿವೆ. ಬಹುಶಃ ಬಿಜೆಪಿಗರು ಈಗ ಹುಟ್ಟಿ, ಈಗ ಕಣ್ಣು ಬಿಟ್ಟಿರಬಹುದು ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಾರೆ.
ಮೋದಿಯಿಂದ ಭಾರತವನ್ನು ಗುರುತಿಸುವ ವಿಷಯಗಳು ಬೇರೆಯೇ ಇವೆ, ಕುಸಿದು ಬಿದ್ದ ಆರ್ಥಿಕತೆಗೆ; ನಿರುದ್ಯೋಗ ಪ್ರಮಾಣ ವೃದ್ಧಿಗೆ; ಕೋಮು ಸಂಘರ್ಷಕ್ಕೆ; ಟೆಲಿಫ್ರಾಂಪ್ಟರ್ಗೆ; ಮಣಿಪುರದ ಗಲಭೆಗೆ; ಸರ್ವಾಧಿಕಾರಕ್ಕೆ; ಮತಗಳ್ಳತನಕ್ಕೆ; ಪ್ರಜಾಪ್ರಭುತ್ವ ವ್ಯವಸ್ಥೆಯ ಕುಸಿತಕ್ಕೆ ಎಂದಿದ್ದಾರೆ.
ಈ ಎಲ್ಲಾ ನಕಾರಾತ್ಮಕ ವಿಷಯಗಳಿಂದ ಭಾರತವನ್ನು ಗುರುತಿಸುವಂತಾಗಿರುವುದು ಮೋದಿಯವರ ಹೆಗ್ಗಳಿಕೆ. ಇಂತಹ ಗುರುತಿಸುವಿಕೆ ದೇಶಕ್ಕೆ ಕೆಟ್ಟ ಹೆಸರೇ ಹೊರತು ಬೆನ್ನು ತಟ್ಟಿಕೊಳ್ಳುವ ಸಂಗತಿಯಲ್ಲ.
ಗಾಂಧಿಯನ್ನು ಅಪ್ರಸ್ತುತಗೊಳಿಸುವ ಬಿಜೆಪಿಗರ ಪ್ರಯತ್ನಕ್ಕೆ ಸಾವಿರ ವರ್ಷಗಳಾದರೂ ಯಶಸ್ಸು ಸಿಗುವುದಿಲ್ಲ. ಬುದ್ಧ, ಗಾಂಧಿ, ಅಂಬೇಡ್ಕರ್, ನೆಹರು. ಇವರೆಲ್ಲರೂ ಈ ದೇಶದ ಆತ್ಮಶಕ್ತಿ ಎಂದು ತಿರುಗೇಟು ನೀಡಿದ್ದಾರೆ.