ನವದೆಹಲಿ: ಕೃತಕ ಬುದ್ಧಿಮತ್ತೆಯನ್ನು (AI) ಮಾನವ ಕಲ್ಯಾಣಕ್ಕಾಗಿ ಉಪಯೋಗಿಸುವುದೇ ಭಾರತದ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ವಿಶೇಷವಾಗಿ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಪೂರಕವಾಗಿರಬೇಕು ಎಂದೂ ಅವರು ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ AI ಇಂಪ್ಯಾಕ್ಟ್ ಶೃಂಗಸಭೆ- 2026ಅನ್ನು ಉದ್ದೇಶಿಸಿ ಇಂದು ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆಯನ್ನು (ಎ.ಐ) ಪ್ರಜಾಸತಾತ್ಮಕಗೊಳಿಸಬೇಕು. ಒಳಗೊಳ್ಳುವಿಕೆ ಹಾಗೂ ಸಬಲೀಕರಣಕ್ಕೆ ಎಐ ಅನ್ನು ಬಳಸಬೇಕು ಎಂದು ಹೇಳುತ್ತಾ ಭಾರತದ ಭವಿಷ್ಯದ AI ನೀಲನಕ್ಷೆಯನ್ನು ಬಿಚ್ಚಿಟ್ಟರು.
ವಿಶ್ವದ ಆರನೇ ಒಂದರಷ್ಟು ಜನಸಂಖ್ಯೆ, ಇರುವ ಭಾರತದಲ್ಲಿ ಈ ಸಮಾವೇಶ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಮಾನವ ಇತಿಹಾಸದಲ್ಲಿ ಎ.ಐ ಒಂದು ಪರಿವರ್ತನಾತ್ಮಕ ಅಧ್ಯಾಯವಾಗಿದೆ ಎಂದರು.
ಭಾರತ ತಂತ್ರಜ್ಞಾನವನ್ನು ನಿರ್ಮಿಸುವುದರ ಜತೆಗೆ ಅದನ್ನು ಅಷ್ಟೇ ವೇಗವಾಗಿ ಅಳವಡಿಸಿಕೊಳ್ಳುತ್ತಿದೆ. ಕೆಲವರಿಗೆ ಹೊಸ ತಂತ್ರಜ್ಞಾನಗಳ ಬಗ್ಗೆ ಅನುಮಾನವಿದೆ. ಆದರೆ ಯುವ ಪೀಳಿಗೆಯು ಎ.ಐ ಅನ್ನು ಅಳವಡಿಸಿಕೊಳ್ಳುತ್ತಿರುವ ರೀತಿ ಅಭೂತಪೂರ್ವವಾದುದು. ಇಲ್ಲಿನ ಶೃಂಗಸಭೆಯ ಪ್ರದರ್ಶನದ ಬಗ್ಗೆಯೂ ಅಪಾರ ಉತ್ಸಾಹ ವ್ಯಕ್ತವಾಗಿದೆ ಎಂದು ಅವರು ಹೇಳಿದರು.
ನಾಗರಿಕತೆಯನ್ನು ಬದಲಿಸುವ ಮತ್ತು ಅಭಿವೃದ್ಧಿಯ ವೇಗವನ್ನು ಪರಿವರ್ತಿಸುವ ಶಕ್ತಿ ಎಐಗೆ ಇದೆ. ಇತಿಹಾಸದಲ್ಲಿ ಕೃತಕ ಬುದ್ಧಿಮತ್ತೆಯು ಅಂತಹ ಒಂದು ದೊಡ್ಡ ಬದಲಾವಣೆಯಾಗಿದೆ ಎಂದಿದ್ದಾರೆ.
ನವದೆಹಲಿಯ‘ಭಾರತ್ ಮಂಟಪ’ದಲ್ಲಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸನಾಯಕ, ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೇ, ಮಾರಿಷಸ್ ಪ್ರಧಾನಿ ನವೀನ್ ಚಂದ್ರ ರಾಮ್ಗೂಲಂ, ಕ್ರೊಯೇಷಿಯಾ ಪ್ರಧಾನಿ ಆಂಡ್ರೆಜ್ ಪ್ಲೆಂಕೊವಿಚ್, ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್, ಸೀಶೆಲ್ಸ್ ಉಪಾಧ್ಯಕ್ಷ ಸೆಬಾಸ್ಟಿಯನ್ ಪಿಲ್ಲೆ, ಎಸ್ಟೋನಿಯಾ ಅಧ್ಯಕ್ಷ ಅಲರ್ ಕರಿಸ್ ಮತ್ತು ಫಿನ್ಲೆಂಡ್ ಪ್ರಧಾನಿ ಪೆಟ್ಟೇರಿ ಒರ್ಪೋ ಭಾಗವಹಿಸಿದ್ದಾರೆ.