2026-05-15 08:39:47

in the name of achche din pm modi cheated people; bk hariprasad|

in the name of achche din pm modi cheated people; bk hariprasad|

 

ಬೆಂಗಳೂರು: ದೇಶದ ಜನರು ನರೇಂದ್ರ ಮೋದಿ ಸರ್ಕಾರದ "ಅಚ್ಚೇದಿನ್" ನೋಡಲೂ ಇಲ್ಲ, "ಅಮೃತಕಾಲ"ದಲ್ಲಿ ಬದುಕಲೂ ಆಗುತ್ತಿಲ್ಲ. ದಿನೇ ದಿನೇ ಏರುತ್ತಿರುವ ಪೆಟ್ರೋಲ್ ಡಿಸೇಲ್ ಗ್ಯಾಸ್ ಬೆಲೆಯಿಂದಾಗಿ ದೇಶದ ಜನರ ಜೀವನವೇ ಬರ್ಬಾದ್ ಆಗುತ್ತಿದೆ. "ಅಚ್ಚೇ ದಿನ್” ಹೆಸರಿನಲ್ಲಿ ದೇಶದ ಜನರಿಗೆ ಮೋಸ ಮಾಡಿದ್ದು ಮೋದಿ  ಸರ್ಕಾರ, ಇಂದು ಜನರಿಗೆ ಕೊಟ್ಟಿರುವುದು ದುಬಾರಿ ಬದುಕು, ತೆರಿಗೆ ದರೋಡೆ ಮತ್ತು ಯುವಜನತೆಗೆ ನಿರುದ್ಯೋಗದ ನರಕ! ಎಂದು ಕಾಂಗ್ರೆಸ್‌ ಮುಖಂಡ, ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.

ಸಾಮಾಇಕ ಜಾಲತಾಣಗಳಲ್ಲಿ ಡೀಸೆಲ್‌, ಪೆಟ್ರೋಲ್‌, ಸಿಎನ್‌ ಜಿ ಬೆಲೆ ಏರಿಕೆ ಕುರಿತು ಅವರು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗಿದೆ ಎಂದು ಸಬೂಬು ಹೇಳುತ್ತಿರುವ ಕೇಂದ್ರ ಸರ್ಕಾರ, ಅದೇ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲಬೆಲೆ ಇಳಿಕೆಯಲ್ಲಿದ್ದಾಗ ಏಕೆ ಪೆಟ್ರೋಲ್ ಡಿಸೇಲ್ ದರ ಕಡಿಮೆ ಮಾಡಲಿಲ್ಲ.? ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದರೂ ದೇಶದ ಜನರಿಗೆ ಲಾಭ ಸಿಗಲಿಲ್ಲ ಏಕೆ? ಅದಾನಿ-ಅಂಬಾನಿ ತೈಲ ಕಂಪನಿಗಳ ಲಾಭಕ್ಕಾಗಿ ಜನ ಸಾಮಾನ್ಯರ ಮೇಲೆ ತೆರಿಗೆ ಹೇರಿದ್ದು ಕೇಂದ್ರ ಸರ್ಕಾರ ಅಲ್ಲವೇ? ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಪೆಟ್ರೋಲ್ ಡೀಸೆಲ್ ತೈಲ ದರ ಏರಿದರೆ ಅದರ ಪರಿಣಾಮ ಕೇವಲ ವಾಹನಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ದೇಶದ ಬೆನ್ನೆಲುಬು ರೈತನ ಹೊಲದಿಂದ ಮಾರುಕಟ್ಟೆಗೆ ಬರುವ ಪ್ರತಿಯೊಂದು ಆಹಾರ ವಸ್ತುವಿನ ಮೇಲೂ ಅದರ ಹೊರೆ ಬೀಳುತ್ತದೆ. ಸಾರಿಗೆ ವೆಚ್ಚ ಹೆಚ್ಚುತ್ತದೆ, ಅದರ ಪರಿಣಾಮವಾಗಿ ತರಕಾರಿ, ಅಕ್ಕಿ, ಹಣ್ಣು, ಹಾಲು ದಿನಬಳಕೆಯ ಪ್ರತಿಯೊಂದು ವಸ್ತುವಿನ ದರವೂ ಏರುತ್ತದೆ. ಅಂತಿಮವಾಗಿ ಸಾಮಾನ್ಯ ಜನರ ಅಡಿಗೆ ಮನೆಯೇ ಕುಸಿದು ಬೀಳುತ್ತದೆ.

ಜನರಿಗೆ “ಅಚ್ಚೇ ದಿನ್” ಭ್ರಮೆ ಸೃಷ್ಟಿಸಿ, ಅದಾನಿ-ಅಂಬಾನಿಗಳಂಥ ಕಾರ್ಪೊರೇಟ್ ಸಾಮ್ರಾಜ್ಯಗಳಿಗೆ "ಅಮೃತಕಾಲ"ವನ್ನೇ ಮೋದಿ ಸರ್ಕಾರ ಧಾರೆ ಎರೆದಿದೆ.  ಚುನಾವಣೆ ಮುಗಿಯುವವರೆಗೆ “ಧರ್ಮ ಅಪಾಯದಲ್ಲಿದೆ”, “ಹಿಂದೂಗಳು ಅಪಾಯದಲ್ಲಿದ್ದಾರೆ”, “ಪಾಕಿಸ್ತಾನ”, “ಮಂದಿರ”, “ಮಂಗಲಸೂತ್ರ” ಎಂಬ ಭಾವನಾತ್ಮಕ ನಾಟಕ. ಚುನಾವಣೆ ಮುಗಿದ ತಕ್ಷಣ ಜನರಿಗೆ ಸಿಗೋದು ಪೆಟ್ರೋಲ್ ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆ, ತೆರಿಗೆ ಹೊಡೆತ ಮತ್ತು ಬದುಕಿನ ಉಸಿರುಗಟ್ಟುವ ಸಂಕಷ್ಟ.

ಜನರ ಜೇಬು ಖಾಲಿ ಮಾಡಿ, ಕಾರ್ಪೊರೇಟ್ ಖಜಾನೆ ತುಂಬಿಸುವ ರಾಜಕಾರಣಕ್ಕೆ ದೇಶ ಎಷ್ಟು ದಿನ ಬಲಿಯಾಗಬೇಕು? ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿರುವ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನರು ಭಾರಿ ಬೆಲೆ ತೇರಬೇಕಿದೆ. ದೇಶದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಕುಸಿಯುವ ದಿನಗಳು ದೂರವಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.