ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಕರಾವಳಿಯ ಜೀವನಾಡಿಯಾದ ಮೀನುಗಾರಿಕೆಗೆ ತೀವ್ರ ಸಂಕಷ್ಟ ಎದುರಾಗಿದೆ. ಮುಖ್ಯವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಆಳ ಸಮುದ್ರ ಮೀನುಗಾರಿಕೆಗೆ ಅಗತ್ಯವಿರುವ ಡೀಸೆಲ್ ಕೊರತೆ ಮೀನುಗಾರರನ್ನು ಆತಂಕಕ್ಕೆ ತಳ್ಳಿದೆ. ಉಡುಪಿ ಮತ್ತು ಮಂಗಳೂರು ಭಾಗದಲ್ಲಿ ಪ್ರತಿದಿನ ಸುಮಾರು 10 ರಿಂದ 12 ಲಕ್ಷ ಲೀಟರ್ ಡೀಸೆಲ್ ಬಳಕೆಯಾಗುತ್ತಿದ್ದು, ಇಂಧನವಿಲ್ಲದೆ ಸಾವಿರಾರು ಬೋಟುಗಳು ದಡ ಸೇರುವ ಭೀತಿಯಲ್ಲಿವೆ.
ಸದ್ಯದ ಪರಿಸ್ಥಿತಿಯಲ್ಲಿ ಸಬ್ಸಿಡಿಗಿಂತಲೂ ಇಂಧನದ ಲಭ್ಯತೆಯೇ ಮೀನುಗಾರರಿಗೆ ಮುಖ್ಯವಾಗಿದೆ. ಈ ಬಿಕ್ಕಟ್ಟನ್ನು ಬಗೆಹರಿಸಲು ಸ್ಥಳೀಯ ಜನಪ್ರತಿನಿಧಿಗಳು ದೆಹಲಿಗೆ ತೆರಳಿ, ಮೀನುಗಾರಿಕೆಯನ್ನು ಆದ್ಯತಾ ವಲಯ ಎಂದು ಪರಿಗಣಿಸಿ ಸಕಾಲಕ್ಕೆ ಡೀಸೆಲ್ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಏಷ್ಯಾದ ದೊಡ್ಡ ಬಂದರುಗಳಲ್ಲಿ ಒಂದಾದ ಮಲ್ಪೆ ಬಂದರಿನ ಸಾವಿರಾರು ಕೋಟಿ ರೂಪಾಯಿ ವಹಿವಾಟು ಈಗ ಈ ಇಂಧನ ಪೂರೈಕೆಯ ಮೇಲೆ ಅವಲಂಬಿತವಾಗಿದೆ.
ಮೀನುಗಾರಿಕಾ ಸೀಸನ್ ಮುಗಿಯಲು ಇನ್ನು ಕೇವಲ 45 ದಿನಗಳು ಬಾಕಿ ಉಳಿದಿದ್ದು, ಈ ಹಂತದಲ್ಲಿ ಉಂಟಾಗಿರುವ ಡೀಸೆಲ್ ಅಭಾವವು ಕರಾವಳಿ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ಸರ್ಕಾರವು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಂಡು ಇಂಧನ ಸಮಸ್ಯೆ ಬಗೆಹರಿಸದಿದ್ದರೆ, ಮೀನುಗಾರಿಕೆಯನ್ನೇ ನಂಬಿರುವ ಲಕ್ಷಾಂತರ ಕುಟುಂಬಗಳ ಜೀವನೋಪಾಯಕ್ಕೆ ಸಂಚಕಾರ ಬರಲಿದೆ. ಕೇಂದ್ರ ಸಚಿವರು ಸದ್ಯ ಭರವಸೆ ನೀಡಿದ್ದು, ಶೀಘ್ರ ಪರಿಹಾರದ ನಿರೀಕ್ಷೆಯಲ್ಲಿ ಮೀನುಗಾರರಿದ್ದಾರೆ.