2026-06-25 02:05:51

Husband killed wife | ಪತ್ನಿಯ ತಲೆ ಕಡಿದು ಕೈಯಲ್ಲಿ ರುಂಡ ಹಿಡಿದು ಊರಿನ ತುಂಬಾ ಮೆರವಣಿಗೆ ಮಾಡಿದ ಪತಿ | Speed News Kannada

Husband killed wife | ಪತ್ನಿಯ ತಲೆ ಕಡಿದು ಕೈಯಲ್ಲಿ ರುಂಡ ಹಿಡಿದು ಊರಿನ ತುಂಬಾ ಮೆರವಣಿಗೆ ಮಾಡಿದ ಪತಿ | Speed News Kannada

ಕೊರ್ಬಾ, ಏಪ್ರಿಲ್ 24: ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘೋರ ಘಟನೆಯೊಂದು ಜರುಗಿದೆ. ಕ್ಷುಲ್ಲಕ ಕೌಟುಂಬಿಕ ಕಲಹ ಮತ್ತು ಮದ್ಯದ ಅಮಲು ಒಬ್ಬ ವ್ಯಕ್ತಿಯನ್ನು ಎಷ್ಟು ಕ್ರೂರನನ್ನಾಗಿ ಮಾಡಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಜಿಲ್ಲೆಯ ರಾಜ್‌ಗಮರ್ ಪೊಲೀಸ್ ಔಟ್‌ಪೋಸ್ಟ್ ವ್ಯಾಪ್ತಿಯ ಬುಂದೇಲಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. 58 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಹರಿತವಾದ ಆಯುಧದಿಂದ ಶಿರಚ್ಛೇದ ಮಾಡಿ, ಬಳಿಕ ಕತ್ತರಿಸಿದ ತಲೆಯನ್ನು ಹಿಡಿದು ಗ್ರಾಮದ ಬೀದಿಗಳಲ್ಲಿ ಓಡಾಡಿದ್ದಾನೆ.
ಆರೋಪಿ ಸಲಿಕ್ ರಾಮ್ ಯಾದವ್ ಸ್ಥಳೀಯ ಕೋಳಿ ಸಾಕಣೆ ಕೇಂದ್ರದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಬುಧವಾರ ಸಂಜೆ ಪತ್ನಿ ಸುಮತಿ (50) ಅವರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದ ಸಲಿಕ್, ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ. ಜಗಳ ವಿಕೋಪಕ್ಕೆ ಹೋದಾಗ, ಕೋಳಿ ಕತ್ತರಿಸಲು ಬಳಸುವ ಹರಿತವಾದ ಮಾಂಸ ಕತ್ತರಿಸುವ ಆಯುಧದಿಂದ ಪತ್ನಿಯ ಕುತ್ತಿಗೆಗೆ ಬಲವಾಗಿ ಏಟು ಹಾಕಿ ಶಿರಚ್ಛೇದ ಮಾಡಿದ್ದಾನೆ. ಹತ್ಯೆಯ ನಂತರದ ದೃಶ್ಯಗಳು ಗ್ರಾಮಸ್ಥರನ್ನು ಸ್ತಬ್ಧಗೊಳಿಸಿದ್ದವು. ಸಲಿಕ್ ಒಂದು ಕೈಯಲ್ಲಿ ಪತ್ನಿಯ ಕತ್ತರಿಸಿದ ತಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ರಕ್ತಸಿಕ್ತ ಆಯುಧವನ್ನು ಹಿಡಿದುಕೊಂಡು ಗ್ರಾಮದ ಬೀದಿಗಳಲ್ಲಿ ಓಡಾಡಿದ್ದಾನೆ. ಬಳಿಕ ತಲೆ ಮತ್ತು ಆಯುಧವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸ್ ವಿಚಾರಣೆಯ ವೇಳೆ ಸಲಿಕ್ ನೀಡಿದ ಹೇಳಿಕೆಗಳು ಆಘಾತಕಾರಿಯಾಗಿವೆ. ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು..
ಮೂಲತಃ ಅಜರ್‌ಬಹಾರ್ ಹಲಿಮಾಡ ಗ್ರಾಮದ ಈ ದಂಪತಿ ಕಳೆದ ಮೂರು ವರ್ಷಗಳಿಂದ ಈ ಕೋಳಿ ಸಾಕಣೆ ಕೇಂದ್ರದಲ್ಲಿ ನೆಲೆಸಿದ್ದರು. ಅವರಿಗೆ ನಾಲ್ಕು ಮಕ್ಕಳಿದ್ದು ತಂದೆ ಜೈಲು ಪಾಲಾಗಿ ತಾಯಿ ಹೆಣವಾಗಿ ಬಿದ್ದಿರುವುದನ್ನು ಕಂಡು ಮಕ್ಕಳು ದಿಕ್ಕೆಟ್ಟಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.