ತಮಿಳುನಾಡು ಸರ್ಕಾರದ (Tamil Nadu Govt) ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಹೊಸೂರು ವಿಮಾನ ನಿಲ್ದಾಣ (Hosur Airport) ಕೂಡಾ ಒಂದು. ಬೆಂಗಳೂರಿನ ದಕ್ಷಿಣ ಭಾಗಕ್ಕೆ ಅಂದರೆ ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಇಂಡಸ್ಟ್ರಿಯಲ್ ಏರಿಯಾದ ಹತ್ತಿರದಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು.ಇನ್ನು ಈ ವಿಮಾನ ನಿಲ್ದಾಣ ಕರ್ನಾಟಕ ಮತ್ತು ತಮಿಳುನಾಡು ಗಡಿಯ (Karnataka-Tamil Nadu Border) ಸಮೀಪದಲ್ಲಿದ್ದು ಎರಡೂ ರಾಜ್ಯಗಳ ಆರ್ಥಿಕ ಬೆಳವಣಿಗೆಗೆ ಬಹಳ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆದ್ರೆ ಸದ್ಯ ಈ ಯೋಜನೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ತಮಿಳುನಾಡಿನ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಹೊಸೂರು ಕೂಡಾ ಒಂದು. ಸದ್ಯ ಈ ನಗರ 500ಕ್ಕೂ ಅಧಿಕ ದೊಡ್ಡ ಹಾಗೂ 3000ಕ್ಕೂ ಹೆಚ್ಚು ಸಣ್ಣ, ಮಧ್ಯಮ ಕೈಗಾರಿಕೆಗಳನ್ನು ಹೊಂದಿದೆ. ಇದೀಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ತಮಿಳುನಾಡು ಸರ್ಕಾರವು, ಹೊಸೂರು ಸಮೀಪದ ಬೇರಿಗೈ-ಬಾಗಲೂರು ಪ್ರದೇಶದಲ್ಲಿ ಸ್ಥಳ ಗುರುತಿಸಿ ವಿವರವಾದ ಯೋಜನಾ ವರದಿ (DPR) ಸಲ್ಲಿಸಿತ್ತು.
ಆದರೆ, ಕೇಂದ್ರ ಸರ್ಕಾರವು ಪಕ್ಕದಲ್ಲ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (HAL) ವಾಯುನೆಲೆ ಇರುವುದನ್ನು ಕಾರಣವಾಗಿ ನೀಡಿ, ತಮಿಳುನಾಡು ಪ್ರಸ್ತಾಪಿಸಿದ್ದ ಯೋಜನೆಯನ್ನು ತಿರಸ್ಕರಿಸಿತ್ತು. ಇದೀಗ, HAL ಏರ್ಸ್ಪೇಸ್ಗೆ ಅಡ್ಡಿಯಾಗದಂತೆ ವಿಮಾನ ನಿಲ್ದಾಣವನ್ನು ಹೇಗೆ ಕಾರ್ಯಗತಗೊಳಿಸುವುದು ಎಂಬುದರ ಬಗ್ಗೆ ತಾಂತ್ರಿಕ ಬದಲಾವಣೆಗಳೊಂದಿಗೆ ಹೊಸ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲು ತಮಿಳುನಾಡು ಸರ್ಕಾರ ಸಿದ್ಧವಾಗಿದೆ ಎಂದು ಹೇಳಲಾಗಿದೆ.
ವಿಧಾನಸಭಾ ಚುನಾವಣಾ ಹಿನ್ನೆಲೆ ಹೊಸ ಪ್ಲಾನ್ -
ತಮಿಳುನಾಡು ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ಹೆಚ್ಚಾಗಿದೆ. ಕೆಲವೇ ತಿಂಗಳಲ್ಲಿ ತಮಿಳುನಾಡಿನಲ್ಲಿ ಹಾಗೂ ಕೇಂದ್ರದ ಅನುಮತಿ ವಿಳಂಬವಾಗಿರುವುದರಿಂದ, ಭೂಸ್ವಾಧೀನ ಪ್ರಕ್ರಿಯೆಯನ್ನು ಸದ್ಯಕ್ಕೆ ನಿಧಾನಗೊಳಿಸಲಾಗಿದೆ.ಅಂದಾಜು 2979 ಎಕರೆ ಭೂಮಿ ಯೋಜನೆಗೆ ಅಗತ್ಯವಿದ್ದು, 800 ಎಕರೆ ಸರ್ಕಾರದ ವಶದಲ್ಲಿದೆ. ಉಳಿದ ಭೂಮಿಯನ್ನು 12 ಗ್ರಾಮಗಳಿಂದ (10 ಹೊಸೂರು ತಾಲೂಕು, 2 ಸೂಳಗಿರಿ ತಾಲೂಕು) ಸ್ವಾಧೀನಪಡಿಸಿಕೊಳ್ಳಬೇಕಿದೆ. ಇದರಲ್ಲಿ ಕೃಷಿ ಭೂಮಿಯೂ ಸೇರಿದೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ರೈತರಿಂದ ವಿರೋಧ ಎದುರಾಗಿದ್ದು, ಸಮಾಲೋಚನೆ ಬಹಳ ಅಗತ್ಯವಿದೆ. ಅದೇ ಕಾರಣದಿಂದ ಇದೀಗ ತಮಿಳುನಾಡು ಸರ್ಕಾರ ವಿಶೇಷ ಪ್ಲಾನ್ ಮಾಡಿದೆ.
ಅಲ್ಲದೇ ಕೃಷ್ಣಗಿರಿ ಜಿಲ್ಲಾಧಿಕಾರಿಯನ್ನು ಭೂಸ್ವಾಧೀನ ಅಧಿಕಾರಿಯನ್ನಾಗಿ ನೇಮಿಸಿ, ಸರ್ಕಾರ ಈಗಾಗಲೇ ಕಾರ್ಯಗಳನ್ನು ಆರಂಭಿಸಿದೆ. ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಹೊಸೂರು ವಿಮಾನ ನಿಲ್ದಾಣ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ದೃಢವಾಗಿ ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸೂರು ಏರ್ಪೋರ್ಟ್ ನಿರ್ಮಾಣಕ್ಕೆ ಅಡ್ಡಿ ಬಿಐಎಎಲ್ ಒಪ್ಪಂದದಡಿ ಬೆಂಗಳೂರು ವಿಮಾನ ನಿಲ್ದಾಣದಿಂದ 150 ಕಿ.ಮೀ ಒಳಗೆ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಿರ್ಬಂಧ ಹೇರಲಾಗಿದೆ. ಅದೇ ಕಾರಣದಿಂದ ಹೊಸೂರು ವಿಮಾನ ನಿಲ್ದಾಣಕ್ಕೆ ಭಾರೀ ಅಡ್ಡಿಯಾಗುತ್ತಿದೆ. ಅಲ್ಲದೇ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪದಲ್ಲಿದ್ದು, ಹೊಸೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗಾಗಿ ಭೂಮಿ ಸ್ವಾಧೀನ ಮಾಡುವ ಕಾರ್ಯವನ್ನು ತಾತ್ಕಾಲಿಕ ನಿಧಾನಗೊಳಿಸಿದೆ. ಎಂದು ಹೇಳಲಾಗಿದೆ. ಇದು ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿಲ್ಲ, ಬದಲಿಗೆ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ತಡವಾಗಲಿದೆ. ಚುನಾವಣೆ ಹತ್ತಿರದಲ್ಲಿರಬೇಕಾದರೆ, ಭೂಸ್ವಾಧೀನದಂತಜ ವಿಷಯಗಳು, ರಾಜಕೀಯ ವಿವಾದಕ್ಕೆ ಕಾರಣವಾಗಬಹುದು. ಆದ್ದರಿಂದ ಚುನಾವಣಾ ತಂತ್ರಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.