ಮಂಗಳೂರು: ಪ್ರಸ್ತುತ ದಲಿತ ಮುಖ್ಯಮಂತ್ರಿ ಕುರಿತು ಯಾವುದೇ ಚರ್ಚೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ರಾಜ್ಯ ಸರ್ಕಾರ ಬಜೆಟ್ ತಯಾರಿಯಲ್ಲಿ ನಿರತವಾಗಿದೆ ಎಂದೂ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ದಲಿತ ಮುಖ್ಯಮಂತ್ರಿ ಕುರಿತು ಸಚಿವ ಮಹದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ಮಹದೇವಪ್ಪ ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಯಾವುದೇ ಜವಬ್ದಾರಿ ಕೊಟ್ಟರೂ ನಿಭಾಯಿಸುವ ಶಕ್ತಿ ಅವರಿಗೆ ಇದೆ. ಆದ್ದರಿಂದಲೇ ಅವರು ದಲಿತ ಸಿಎಂ ಕುರಿತು ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ಸಾರ್ವಜನಿಕರು ತಮ್ಮದೇ ಆದ ನಾಯಕರನ್ನು ಆರಿಸಿಕೊಳ್ಳುತ್ತಾರೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ಒಟ್ಟಾರೆ ಇಂತಹ ವಿಷಯಗಳಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಹತ್ತು ಮಂದಿ ನನ್ನ ಪರವಾಗಿ ಘೋಷಣೆ ಕೂಗಿದರೆ ಸಾಕಾಗುವುದಿಲ್ಲ. ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಹೈಕಮಾಂಡ್ ಎಲ್ಲ ಆಯಾಮಗಳಿಂದಲೂ ಅವಲೋಕಿಸುತ್ತದೆ. ಅಂತಹ ಸಂದರ್ಭ ಈಗ ಎದುರಾಗಿಲ್ಲ ಎಂದು ಹೇಳಿದರು.
ಶಾಸಕರ ವಿದೇಶ ಪ್ರವಾಸ ಕುರಿತು ಮಾಹಿತಿ ಇಲ್ಲ. ತಮ್ಮದೇ ಹಣದಲ್ಲಿ ಅವರು ಎಲ್ಲಿಗೆ ಬೇಕಾದರೂ ಪ್ರವಾಸ ಹೋಗಬಹುದು. ಬಜೆಟ್ ತಯಾರಿಯಲ್ಲಿ ಶಾಸಕರಿಗೆ ಯಾವುದೇ ಪಾತ್ರ ಇರುವುದಿಲ್ಲ. ಮುಖ್ಯಮಂತ್ರಿಗಳು ಮತ್ತು ಆರ್ಥಿಕ ಇಲಾಖೆ ಆಯವ್ಯಯ ಸಿದ್ದಪಡಿಸುತ್ತದೆ ಎಂದು ತಿಳಿಸಿದರು.