ಹೊಸಪೇಟೆ (ವಿಜಯನಗರ): ದಕ್ಷಿಣ ಕಾಶಿ, ಶಿವನು ಮನ್ಮಥನನ್ನು ದಹಿಸಿದ ಕ್ಷೇತ್ರ ಎಂದೇ ಪ್ರಸಿದ್ಧವಾಗಿರುವ ಹಂಪಿಯ ವಿರೂಪಾಕ್ಷ ದೇವಸ್ಥಾನದ ಮುಂಭಾಗ ಬುಧವಾರ ನೂರಾರು ವಿದೇಶಿಯರ ಸಹಿತ ಸಾವಿರಾರು ಮಂದಿ ಬಣ್ಣದೋಕುಳಿಯಲ್ಲಿ ಮಿಂದೆದ್ದು ಹೋಳಿ ಆಚರಿಸಿದರು. ಬೆಳಿಗ್ಗೆ 10 ಗಂಟೆಯಿಂದಲೇ ದೇವಸ್ಥಾನದ ಮುಂಭಾಗ ಸೇರತೊಡಗಿದ ಜನರು ಪರಸ್ಪರ ಬಣ್ಣ ಹಚ್ಚಿಕೊಂಡು, ಹೋಳಿಯ ಶುಭಾಶಯ ಕೋರಿದರು. ಒಬ್ಬೊಬ್ಬರಾಗಿ ವಿದೇಶಿಯರು ಬರುತ್ತಿದ್ದಂತೆಯೇ ಹೋಳಿಯ ರಂಗು ಏರಿಬಿಟ್ಟಿತು.
ನೋಡುತ್ತ ನೋಡುತ್ತ ವಿದೇಶಿಯರ ಸಂಖ್ಯೆ ನೂರಾರು ದಾಟಿ ಹೋಯಿತು. ಓಕುಳಿಯಲ್ಲಿ ಮಿಂದೆದ್ದವರ ಬಣ್ಣವೆಲ್ಲಾ ಒಂದೇ ಆಗಿತ್ತು. ಹೀಗಾಗಿ ಅಪರೂಪಕ್ಕೆ ಎಂಬಂತೆ ಏಕಬಣ್ಣದ ಜಗತ್ತಿನ ತುಣುಕೊಂದು ಹಂಪಿಯ ರಥಬೀದಿಯಲ್ಲಿ ಬಂದು ಬಿದ್ದಿತೇನೋ ಎಂಬ ಭಾವನೆ ಮೂಡಿತು.
ವಿರೂಪಾಕ್ಷ ದೇವಸ್ಥಾನದ ಮುಂಭಾಗದಿಂದ ಜನತಾ ಪ್ಲಾಟ್ನಲ್ಲಿ ಒಂದು ಸಣ್ಣ ಸುತ್ತು ಹಾಕಿದ ವಿದೇಶಿಯರು ಹಾಗೂ ಸ್ಥಳೀಯ ಯುವಕ, ಯುವತಿಯರು, ಮತ್ತೊಮ್ಮೆ ದೇವಸ್ಥಾನದ ಮುಂಭಾಗದಿಂದ ಬಂದು, ಜನತಾ ಪ್ಲಾಟ್ನ ಒಳಭಾಗದಲ್ಲಿ ಓಕುಳಿಯಾಟ ಆಡುತ್ತ ತುಂಗಭದ್ರಾ ನದಿಯತ್ತ ತೆರಳಿ ಸ್ನಾನ ಮಾಡಿದರು. ಸುಮಾರು ಮೂರು ಗಂಟೆ ಹೊತ್ತು ನೂರಾರು ವಿದೇಶಿ ಪ್ರವಾಸಿಗರು ಸ್ಥಳೀಯರೊಂದಿಗೆ ಸೇರಿ ಆಡಿದ ರಂಗಿನಾಟ, ಮಾಡಿದ ನೃತ್ಯ, ಎರಚಿದ ಬಣ್ಣ ಸೃಷ್ಟಿಸಿದ ಲೋಕ ಅದ್ಭುತವಾಗಿತ್ತು. ಎಲ್ಲರ ಬಣ್ಣವೂ ಒಂದೇ ರೀತಿ ಕಾಣಿಸಿತು. ಜಗತ್ತು ಬಯಸಿದ ಅಪರೂಪದ ಸನ್ನಿವೇಶ ಇಲ್ಲಿ ನಿರ್ಮಾಣವಾಗಿತ್ತು.