ಬೆಂಗಳೂರು : 2026ರ ಐಪಿಎಲ್ ಸೀಸನ್ ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಚಿನ್ನಸ್ವಾಮಿಯಲ್ಲೇ ಉದ್ಘಾಟನಾ ಪಂದ್ಯ ಆಡಲು ಆರ್ಸಿಬಿ ನಿರ್ಧರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ 5 ಐಪಿಎಲ್ ಪಂದ್ಯ ಆಡಲು ಆರ್ಸಿಬಿ ಮ್ಯಾನೇಜೆಂಟ್ ಇದೀಗ ಸಮ್ಮತಿ ಸೂಚಿಸಿದೆ ಈ ಮೂಲಕ ಆರ್ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಕಳೆದ ವರ್ಷ ಜೂನ್ನಲ್ಲಿ ನಡೆದ ಭೀಕರ ಕಾಲ್ತುಳಿತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಮುಖ ಪಂದ್ಯ, ಟೂರ್ನಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ರಾಜ್ಯ ಸರ್ಕಾರವು ಚಿನ್ನಸ್ವಾಮಿಯಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಸಿಎ)ಗೆ ಷರತ್ತು ಬದ್ದ ಅನುಮತಿ ನೀಡಿತ್ತು. ಆದರೆ ಆರ್ಸಿಬಿಯು ಕೆಲ ಕಾರಣಗಳಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸುತ್ತಿತ್ತು.
ಕೆಎಸ್ಸಿಎ ಪದಾಧಿಕಾರಿಗಳು ಕೂಡಾ ಚಿನ್ನಸ್ವಾಮಿಯಲ್ಲಿ ಆಡುವಂತೆ ಆರ್ಸಿಬಿಗೆ ಮನವಿ ಮಾಡಿದ್ದರೂ ಅದಕ್ಕೆ ಫ್ರಾಂಚೈಸಿಯು ಒಪ್ಪಿರಲಿಲ್ಲ. ಅದರೆ ಈಗ ಒಪ್ಪಿಕೊಂಡಿದೆ. 5 ಪಂದ್ಯಗಳನ್ನು ಆಡಲು ಆರ್ಸಿಬಿ ಆಡಳಿತ ಮಂಡಳಿ ಇದೀಗ ಒಪ್ಪಿಗೆ ಸೂಚಿಸಿದೆ. ಆರ್ಸಿಬಿ ಮೂಲಗಳಿಂದ ಇದೀಗ ಈ ಒಂದು ಮಾಹಿತಿ ಲಭ್ಯವಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 5 ಪಂದ್ಯ ಹಾಡಲು ಆರ್ಸಿಬಿ ಆಡಳಿತ ಮಂಡಳಿ ಸಮ್ಮತಿ ಸೂಚಿಸಿದೆ. ಛತ್ತೀಸ್ಗಡದ ರಾಯಪುರದಲ್ಲಿ ಎರಡು ಪಂದ್ಯ ಆಡಲು ಒಪ್ಪಿಗೆ ಸೂಚಿಸಿದೆ. ಇದೇ ಮಾರ್ಚ್ 28ರಿಂದ ಐಪಿಎಲ್ ಆರಂಭ
2026ನೇ ಸಾಲಿನ ಐಪಿಎಲ್ ಟೂರ್ನಿಯು ಇದೇ ಮಾರ್ಚ್ 28ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯವು ಮೇ 31ರಂದು ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬದ್ಧ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲವೇ ಕಳೆದ ಆವೃತ್ತಿಯ ರನ್ನರ್ ಅಪ್ ಪಂಜಾಬ್ ಕಿಂಗ್ಸ್ ತಂಡದ ಎದುರು ಕಣಕ್ಕಿಳಿಯುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ.
ಕಳೆದ ಜೂನ್ 04ರಂದು ಆರ್ಸಿಬಿ ಸಂಭ್ರಮಾಚರಣೆಯನ್ನು ಕಣ್ಣುಂಬಿಕೊಳ್ಳಲು ವಿಧಾನಸೌಧ ಹಾಗೂ ಎಂ ಚಿನ್ನಸ್ವಾಮಿ ಸ್ಟೇಡಿಯಂನ ಸುತ್ತಮುತ್ತ ಏಕಕಾಲದಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.
ಹೊಸ ಮಾಲೀಕತ್ವ ಆರ್ಸಿಬಿ ತಂಡದ ಮಾರಾಟ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು ಮಾರ್ಚ್ ಮಧ್ಯಭಾಗದಲ್ಲಿ ಹೊಸ ಮಾಲೀಕರು ಯಾರೆಂದು ಖಚಿತವಾಗಲಿದೆ. ಆರ್ಸಿಬಿ ಒಡೆತನ ಹೊಂದಿರುವ ಡಿಯಾಜಿಯೋ ಕಂಪನಿ, ಕೊನೇ ಹಂತದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರ ಪಟ್ಟಿಯನ್ನು ಈಗಾಗಲೆ ಅಂತಿಮಗೊಳಿಸಿದೆ. ಮಾರ್ಚ್ 10ರಂದು ಅಂತಿಮ ಹಂತದ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ.