ಸಿಲಿಕಾನ್ ಸಿಟಿ ಬೆಂಗಳೂರಿನ ಕಟ್ಟಡ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಥವಾ GBA ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ನಿಯಮಗಳಲ್ಲಿ ಮಹತ್ವದ ತಿದ್ದುಪಡಿ ತರಲು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಇದುವರೆಗೆ ಬೆಂಗಳೂರಿನಲ್ಲಿ ಅನುಮೋದಿತ ನಕ್ಷೆಗಿಂತ ಶೇ. 5ರಷ್ಟು ಮಾತ್ರ ಉಲ್ಲಂಘನೆಗೆ ಅವಕಾಶವಿತ್ತು. ಆದರೆ ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಈ ಮಿತಿಯನ್ನು ಶೇ. 15ಕ್ಕೆ ಹೆಚ್ಚಿಸಲಾಗಿದೆ. ನಕ್ಷೆಗೆ ವಿರುದ್ಧವಾಗಿ ಸಣ್ಣಪುಟ್ಟ ಬದಲಾವಣೆ ಅಥವಾ ಹೆಚ್ಚುವರಿ ಮಹಡಿ ನಿರ್ಮಿಸಿ ಸಂಕಷ್ಟಕ್ಕೀಡಾಗಿದ್ದ ಮಾಲೀಕರು, ಇನ್ನು ಮುಂದೆ ನಿಗದಿತ ದಂಡ ಪಾವತಿಸಿ ತಮ್ಮ ಕಟ್ಟಡಗಳನ್ನು ನಿಯಮಿತಗೊಳಿಸಿಕೊಳ್ಳಬಹುದು.
ನಕ್ಷೆ ಉಲ್ಲಂಘನೆಯಿಂದಾಗಿ ಬಹಳಷ್ಟು ಜನರಿಗೆ ಒಕ್ಕುಪೆನ್ಸಿ ಸರ್ಟಿಫಿಕೇಟ್ ಸಿಗದೆ ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯಲು ತೊಂದರೆಯಾಗುತ್ತಿತ್ತು. ಸರ್ಕಾರದ ಈ ಹೊಸ ನಿರ್ಧಾರದಿಂದ ಅಂತಹ ತಾಂತ್ರಿಕ ಅಡೆತಡೆಗಳು ದೂರವಾಗಲಿವೆ ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ತಿಳಿಸಿದ್ದಾರೆ. ಈ ಕುರಿತ ಕರಡು ಅಧಿಸೂಚನೆಯನ್ನು ಈಗಾಗಲೇ ಬಿಬಿಎಂಪಿ ಮತ್ತು ಜಿಬಿಎ ವೆಬ್ಸೈಟ್ಗಳಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ತಮ್ಮ ಸಲಹೆ ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಏಪ್ರಿಲ್ 30ರವರೆಗೆ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರಿಂದ ಬರುವ ಪ್ರತಿಕ್ರಿಯೆಗಳನ್ನು ಪರಿಶೀಲಿಸಿದ ನಂತರ ಸರ್ಕಾರ ಅಂತಿಮ ಆದೇಶ ಹೊರಡಿಸಲಿದೆ. ಒಟ್ಟಿನಲ್ಲಿ ನಿಯಮಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಬೆಂಗಳೂರಿನ ಮನೆ ಮಾಲೀಕರಿಗೆ ಇದೊಂದು ದೊಡ್ಡ ರಿಲೀಫ್ ಎನ್ನಬಹುದು.