ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸರಗಳ್ಳತನದ ಸರಣಿ ಪ್ರಕರಣಗಳ ನಡುವೆ, ಚಿಕ್ಕಬಳ್ಳಾಪುರ ನಗರದಲ್ಲಿ ಒಂದು ವಿಲಕ್ಷಣ ಘಟನೆ ಸಂಭವಿಸಿದೆ. ಕಳ್ಳರು ಕಿತ್ತುಕೊಂಡು ಹೋಗಿದ್ದ ಚಿನ್ನದ ಸರವು ಎರಡು ದಿನಗಳ ನಂತರ ನಿಗೂಢವಾಗಿ ಸಂತ್ರಸ್ತೆಯ ಮನೆ ಮುಂದೆಯೇ ಪ್ರತ್ಯಕ್ಷವಾಗಿದೆ. ನಗರದ 23ನೇ ವಾರ್ಡ್ ಚಾಮರಾಜಪೇಟೆಯಲ್ಲಿ ಮೇ 3ರಂದು ಈ ಕೃತ್ಯ ನಡೆದಿತ್ತು. ಮನೆಯ ಮುಂದೆ ನೀರು ಬಂದಿದೆಯೇ ಎಂದು ಪರೀಕ್ಷಿಸಲು ಸಂಪ್ ಬಳಿ ಹೋಗಿದ್ದ ಪ್ರಿಯಾ ಎಂಬ ಗೃಹಿಣಿಯನ್ನು ಪಲ್ಸರ್ ಬೈಕ್ನಲ್ಲಿ ಬಂದ ಇಬ್ಬರು ಖದೀಮರು ಅಡ್ಡಗಟ್ಟಿದ್ದರು.
ಈ ವೇಳೆ ಮಹಿಳೆಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದ ಕಳ್ಳರು, ಚಾಕು ತೋರಿಸಿ ಬೆದರಿಸಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಕುತ್ತಿಗೆಗೆ ಬಿಗಿಯಾಗಿ ಹಿಡಿತ ಸಾಧಿಸಿದ್ದರಿಂದ ಪ್ರಿಯಾ ಅವರಿಗೆ ಕೂಗಿಕೊಳ್ಳಲು ಸಹ ಸಾಧ್ಯವಾಗಿರಲಿಲ್ಲ.
ಪೊಲೀಸ್ ತನಿಖೆ ಮತ್ತು ಸಿಸಿಟಿವಿ ಭೇಟೆ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ನಗರ ಠಾಣೆಯ ಪೊಲೀಸರು, ಕೂಡಲೇ ಕಾರ್ಯಾಚರಣೆ ಚುರುಕುಗೊಳಿಸಿದ್ದರು. ಚಿಕ್ಕಬಳ್ಳಾಪುರದಿಂದ ದೇವನಹಳ್ಳಿವರೆಗಿನ ಪ್ರಮುಖ ರಸ್ತೆಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗೆ ತಂಡ ರಚಿಸಲಾಗಿತ್ತು. ಬಾತ್ರೂಂ ಮೆಟ್ಟಿಲ ಬಳಿ ಸರ ಪತ್ತೆ ಪೊಲೀಸರು ಕಳ್ಳರ ಬೆನ್ನತ್ತಿರುವಾಗಲೇ ಮೇ 5ರ ಬೆಳಿಗ್ಗೆ ಈ ಪ್ರಕರಣದಲ್ಲಿ ಅನಿರೀಕ್ಷಿತ ತಿರುವು ಸಿಕ್ಕಿದೆ. ಪ್ರಿಯಾ ಅವರ ಪತಿ ಬೆಳಿಗ್ಗೆ ವಾಶ್ರೂಂಗೆ ಹೋಗುವಾಗ, ಬಾತ್ರೂಂ ಮೆಟ್ಟಿಲ ಸಮೀಪವೇ ಚಿನ್ನದ ಸರ ಬಿದ್ದಿರುವುದು ಕಂಡುಬಂದಿದೆ. ಕಳ್ಳತನವಾಗಿದ್ದ ಸರವೇ ವಾಪಸ್ ಬಂದಿರುವುದನ್ನು ಕಂಡು ದಂಪತಿ ಕ್ಷಣಕಾಲ ಅವಕ್ಕಾಗಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ತನಿಖೆಯ ಭೀತಿಯಿಂದ ಕಳ್ಳರೇ ಸರವನ್ನು ವಾಪಸ್ ತಂದು ಎಸೆದು ಹೋಗಿದ್ದಾರೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ನಿಗೂಢತೆಯನ್ನು ಭೇದಿಸಲು ಈಗ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.