2026-03-07 12:36:36

Gichi Giligili | ಸಣ್ಣ ಪಟಾಕಿಗಳ ದೊಡ್ಡ ಧಮಾಕಾ ನಿಮ್ಮ ನೆಚ್ಚಿನ ಗಿಚ್ಚಿ ಗಿಲಿಗಿಲಿ ಈಗ ಪುಟಾಣಿ ಮಕ್ಕಳೊಂದಿಗೆ ಹೊಸ ಅವತಾರದಲ್ಲಿ! | Speed News Kannada

Gichi Giligili | ಸಣ್ಣ ಪಟಾಕಿಗಳ ದೊಡ್ಡ ಧಮಾಕಾ ನಿಮ್ಮ ನೆಚ್ಚಿನ ಗಿಚ್ಚಿ ಗಿಲಿಗಿಲಿ ಈಗ ಪುಟಾಣಿ ಮಕ್ಕಳೊಂದಿಗೆ ಹೊಸ ಅವತಾರದಲ್ಲಿ! | Speed News Kannada

ಜನವರಿ 31ರಿಂದ ಪ್ರತಿ ಶನಿ-ಭಾನುವಾರ ರಾತ್ರಿ 9ಕ್ಕೆ ನಿಮ್ಮ ನೆಚ್ಚಿನ ಕಲರ್ಸ್‌ ಕನ್ನಡದಲ್ಲಿ ಕುಟುಂಬದ ಹಿರಿಯರಿಂದ ಮನೆಯಲ್ಲಿನ ಪುಟ್‌ ಪುಟಾಣಿ ಮಕ್ಕಳಿಗೂ ಇದು ಹೇಳಿ ಮಾಡಿಸಿದ ಶೋ.. ಕನ್ನಡ ಕಿರುತೆರೆಯ ಇತಿಹಾಸದಲ್ಲಿ ನಗೆಯ ಹಬ್ಬವನ್ನು ಸೃಷ್ಟಿಸಿದ್ದ ಕಲರ್ಸ್‌ ಕನ್ನಡದ 'ಗಿಚ್ಚಿ ಗಿಲಿಗಿಲಿ' ಈಗ ಮೂರು ಯಶಸ್ವಿ ಸೀಸನ್‌ಗಳ ನಂತರ ಮಕ್ಕಳ ಸೈನ್ಯದೊಂದಿಗೆ ವಿಶೇಷ ಆವೃತ್ತಿಯೊಂದಿಗೆ ನಿಮ್ಮ ಮನೆಮನ ಬೆಳಗಲು ಸಿದ್ಧವಾಗಿದೆ. ಮಕ್ಕಳಿಂದ ಹಿರಿಯರವರೆಗೂ ಒಂದಿಡೀ ಕುಟುಂಬ ಕೂತು ನೋಡುವಂಥ ಶೋವನ್ನು ಕರುನಾಡಿನ ಮುಂದೆ ತರ್ತಿದೆ ಕಲರ್ಸ್‌ ಕನ್ನಡ. 'ಗಿಚ್ಚಿ ಗಿಲಿಗಿಲಿ - ಜೂನಿಯರ್ಸ್' ಇದೇ ಶನಿವಾರದಿಂದ ಆರಂಭವಾಗಲಿದ್ದು, ಈಗಾಗಲೇ ಪ್ರೋಮೋಗಳ ಮೂಲಕವೇ ವೀಕ್ಷಕರ ಗಮನ ಸೆಳೆದಿದೆ. 5 ರಿಂದ 10 ವರ್ಷದೊಳಗಿನ ಪ್ರತಿಭೆಗಳು ಹಿರಿಯ ಹಾಸ್ಯ ಕಲಾವಿದರ ಜೊತೆಗೂಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. 
ಈ ಬಾರಿಯ ವಿಶೇಷತೆಯೆಂದರೆ ಮಕ್ಕಳ ಮುಗ್ಧತೆ ಮತ್ತು ಹಿರಿಯ ಕಲಾವಿದರ ಅನುಭವದ ಸಮ್ಮಿಲನ. ಈ ಪುಟ್ಟ ಮಕ್ಕಳು ಇಲ್ಲಿ ಕೇವಲ ಸ್ಪರ್ಧಿಗಳಲ್ಲ, ಇವರು ವೃತ್ತಿಪರ ನಟರಲ್ಲದಿದ್ದರೂ ಸಹಜವಾದ ಹಾಸ್ಯ ಪ್ರಜ್ಞೆಯೊಂದಿಗೆ ಸ್ಕಿಟ್‌ಗಳಲ್ಲಿ ಮಿಂಚಲಿದ್ದಾರೆ. ಅನುಭವಿ ಹಾಸ್ಯ ಕಲಾವಿದರು ಇವರಿಗೆ ಮಂಟರ್ಸ್‌ ಆಗಿ ಸಾಥ್ ನೀಡಲಿದ್ದಾರೆ. ಮಕ್ಕಳ ದೃಷ್ಟಿಕೋನದಲ್ಲಿ ಪ್ರಪಂಚ ಹೇಗಿರುತ್ತದೆ ಎಂಬ ಕತೆಗಳು ಹಾಗೂ ನಗೆಯ ಸನ್ನಿವೇಶಗಳು ಇಲ್ಲಿ ಅನಾವರಣಗೊಳ್ಳಲಿವೆ. ಒಬ್ಬ ಸಾಮಾನ್ಯ ಮಗು ನಟನೆಯ ಜಗತ್ತಿನಲ್ಲಿ ಹಾಸ್ಯ ಕಲಾವಿದನಾಗಿ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಈ ಶೋ ಪ್ರತಿಬಿಂಬಿಸಲಿದೆ.
ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತ ಬರುತ್ತಿರುವ ಕಲರ್ಸ್‌ ಕನ್ನಡ ವಾಹಿನಿ, ‘ನನ್ನಮ್ಮ ಸೂಪರ್‌ ಸ್ಟಾರ್‌ʼ, ʼರಾಜ ರಾಣಿʼ, ʻಮಜಾ ಟಾಕೀಸ್‌ʼ ಗಳಂಥ ಟಾಪ್ ರೇಟಿಂಗ್ ಶೋಗಳನ್ನು ನೀಡಿದೆ. ಇದೀಗ ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್‌ʼ ಪರಿಚಯಿಸುತ್ತಿದೆ. ಇದೇ ಜನವರಿ 31ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಸಲದ ಗಿಚ್ಚಿ ಗಿಲಿ ಜೂನಿಯರ್ಸ್‌ ಶೋಗೆ ಎಂದಿನಂತೆ ಸಾಧುಕೋಕಿಲ, ಸೃಜನ್‌ ಲೋಕೇಶ್‌, ಶ್ರುತಿ ತೀರ್ಪುಗಾರರಾಗಿ ಮುಂದುವರಿಯಲಿದ್ದಾರೆ. ಈ ಬಾರಿ ಪಟ ಪಟ ಅಂತ ಮಾತಾಡೋ ಪಟಾಕಿ ಅನುಪಮಾ ಗೌಡ ಶೋನ ನಿರೂಪಕಿಯಾಗಿದ್ದಾರೆ.  
ರಾಜ್ಯಾದ್ಯಂತ ನಡೆಸಿದ ಆಡಿಷನ್ ಮೂಲಕ ಅತ್ಯಂತ ಚುರುಕಾದ ಮಕ್ಕಳನ್ನು ಈ ಶೋಗೆ ಆಯ್ಕೆ ಮಾಡಲಾಗಿದೆ. 'ನಿನಗಾಗಿ' ಧಾರಾವಾಹಿಯಲ್ಲಿ ಕೃಷ್ಣನಾಗಿ ನಟಿಸಿ ಮನೆಮಾತಾಗಿದ್ದ 7 ವರ್ಷದ ಸಿರಿಸಿಂಚನ ಕೂಡ ಈ ತಂಡದಲ್ಲಿದ್ದಾರೆ. ಉಳಿದಂತೆ ಅಕ್ಷಯ್ ರವಿತೇಜ್ (ಚಿಕ್ಕಮಗಳೂರು), ಚಿರುಶ್ ಆದಿತ್ಯ (ಮಂಗಳೂರು), ಗೌಶಿಕ ಗೌಡ (ಶ್ರೀರಂಗಪಟ್ಟಣ, ಮಂಡ್ಯ), ಏಕಾoತ್  ಚಂದ್ರಪ್ಪ ಮಲಗುಂದ (ಹಾವೇರಿ), ಪಲ್ಲವಿ (ಅರಕಲಗೂಡು, ಹಾಸನ), ಆತ್ಮಿ ಗೌಡ (ಪುತ್ತೂರು, ದಕ್ಷಿಣ ಕನ್ನಡ), ಸಿರಿಸಿಂಚನ (ಬೆಂಗಳೂರು), ಪ್ರಗ್ಯಾ (ಮಂಗಳೂರು), ಅದ್ವಿಕಾ ಬಾಕಿಲ (ಪುತ್ತೂರು), ಪ್ರಗ್ಯ (ಮಂಗಳೂರು), ಮೋಹಕ್ ಗೌಡ (ಬೆಂಗಳೂರು), ವಿಹಾನ್ ಸೂರ್ಯ (ಮೈಸೂರು) ಮತ್ತು ಮಾದೇಶ (ಹೊಳೆನರಸೀಪುರ) ಇವರೆಲ್ಲ ಈ ಸಲದ ಶೋನ ಹೈಲೈಟ್‌.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.