2026-03-07 01:44:06

Free Health check-up Camp at Karnataka Film Artistes Association | ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ | Speed News Kannada

Free Health check-up Camp at Karnataka Film Artistes Association | ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ | Speed News Kannada

ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಕಲಾವಿದರಿಗೆ, ಸಹ ಕಲಾವಿದರಿಗೆ ಹಾಗೂ ಕಾರ್ಮಿಕ ಸಂಘದವರಿಗೆ ಹೀಗೆ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಅನುಕೂಲವಾಗಲೆಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ||ಜಯಮಾಲ ಹಾಗೂ ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್ ಅವರು ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು. ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್, ಖಜಾಂಚಿ ದೊಡ್ಡಣ್ಣ ಮುಂತಾದವರು ಉಪಸ್ಥಿತರಿದ್ದರು. 

ಕಲಾವಿದರ ಸಂಘದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿರುವುದು ಬಹಳ ಒಳ್ಳೆಯ ಕೆಲಸ. ದಯವಿಟ್ಟು ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಿ. ಎಷ್ಟೋ ಖಾಯಿಲೆಗಳು ಬಹಳ ತಡವಾಗಿ ತಿಳಿದು ಸಾಕಷ್ಟು ಜನ ಕಲಾವಿದರನ್ನು ನಾವು ಕಳೆದುಕೊಂಡಿದ್ದೇವೆ. ಇಂತಹ ಆರೋಗ್ಯ ತಪಾಸಣೆ ಶಿಬಿರದಲ್ಲಿ ಎಲ್ಲಾ ರೀತಿಯ ಉಚಿತ ತಪಾಸಣೆಗಳಿದ್ದು, ಇದರ ಉಪಯೋಗ ಪಡದುಕೊಂಡು  ಮುತುವರ್ಜಿ ವಹಿಸಬಹುದು ಎಂದು ತಿಳಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ||ಜಯಮಾಲ, ಶಿಬಿರದ ಆಯೋಜಕರಿಗೆ ಧನ್ಯವಾದ ಹೇಳಿದರು. 

 ಕಲಾವಿದರ ಸಂಘ ಅಂಬರೀಶ್ ಅವರ ಕನಸು. ಅವರು ತಮ್ಮ ಮನೆ ಆಗುವುದಕ್ಕಿಂತ ಹೆಚ್ಚಾಗಿ ಕಲಾವಿದರ ಸಂಘ ಆಗುವುದಕ್ಕೆ ಶ್ರಮಿಸಿದ್ದಾರೆ. ಈ ಸಂಘದಲ್ಲಿ ಕಲಾವಿದರಿಗೆ ಉಪಯೋಗವಾಗುವ ಕಾರ್ಯಗಳು ಆಗುತ್ತಿರಬೇಕೆಂಬುದು ಅಂಬರೀಶ್ ಅವರ ಆಸೆಯಾಗಿತ್ತು.  ಆರೋಗ್ಯವೇ ಮಹಾಭಾಗ್ಯ. ಆರೋಗ್ಯದ ನಂತರ ಮಿಕ್ಕೆಲ್ಲಾ. ಹೀಗಾಗಿ ಕಲಾವಿದರ ಸಂಘದಿಂದ ಕಲಾವಿದರಿಗಾಗಿ ಈ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ತುಂಬಾ ಉತ್ತಮ ಕೆಲಸ‌ ಇದು‌ ಎಂದು ಸುಮಲತಾ ಅಂಬರೀಶ್ ತಿಳಿಸಿದರು.

ಕಲಾವಿದರ ಸಂಘ ಅಂಬರೀಶ್ ಅವರ ಕನಸು. ಅವರು ಸಂಘಕ್ಕೆ ನೀಡುತ್ತಿದ್ದ ಪ್ರೋತ್ಸಾಹವನ್ನು ಈಗ ಸುಮಲತಾ ಅಂಬರೀಶ್ ಅವರು ಮುಂದುವರೆಸಿಕೊಂಡು ಬರುತ್ತಿದ್ದಾರೆ. ನಮ್ಮ ಕಲಾವಿದರ ಸಂಘದಲ್ಲಿ ಈ ರೀತಿಯ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಗಬೇಕೆಂದು ಹೇಳಿದಾಗ ಅದಕ್ಕೆ ಸಂಬಂಧಿಪಟ್ಟ ಸರ್ಕಾರದ ಸಚಿವರು, ಅಧಿಕಾರಿಗಳು ಹಾಗೂ ವೈದ್ಯರ ಜೊತೆಗೆ ಮಾತನಾಡಿ ಈ ಶಿಬಿರವನ್ನು ನಡೆಸಲು  ಅನುಕೂಲ ಮಾಡಿಕೊಟ್ಟಿದ್ದಾರೆ. ಖಜಾಂಚಿ  ದೊಡ್ಡಣ್ಣ ಅವರಂತೂ ಕೆಲವು ತಿಂಗಳಿಂದ ಈ ಆರೋಗ್ಯ ಶಿಬಿರ ನಡೆಸಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಇದರ ಉಪಯೋಗವನ್ನು ಹೆಚ್ಚಿನ ಕಲಾವಿದರು ಪಡೆದುಕೊಳ್ಳಬೇಕು. ಈ ಶಿಬಿರಕ್ಕೆ ಆಗಮಿಸಿರುವ ವಾಣಿಜ್ಯ ಮಂಡಳಿ ಆಧ್ಯಕ್ಷರಾದ ಜಯಮಾಲ ಅವರಿಗೆ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಧನ್ಯವಾದ ಎಂದು ಮಾತನಾಡಿದ ಕಲಾವಿದರ ಸಂಘ ಪ್ರಧಾನ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್, ಸದ್ಯದಲ್ಲೇ ಕಲಾವಿದರ ಸಂಘದ ಚುನಾವಣೆ ನಡೆಯಲಿದೆ ಎಂದು ಹೇಳಿದರು.   

ನಮ್ಮ ಕಲಾವಿದರ ಸಂಘದಲ್ಲಿ ಹೆಚ್ ಸಿ‌ ಜಿ ಕ್ಯಾನ್ಸರ್ ಆಸ್ಪತ್ರೆ, ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ, ಸಪ್ತಗಿರಿ ಕಾಲೇಜು ಮತ್ತು ಆಸ್ಪತ್ರೆ, ನಿಮಾನ್ಸ್ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ, ಪೋರ್ಟಿಸ್ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆ ಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ECG, 2D ECHO, BP, SUGAR, ENT, DETAL, Eye ಹಾಗೂ ಕ್ಯಾನ್ಸರ್ ತಪಾಸಣೆ ಸೇರಿದಂತೆ ಹಲವು ಉಚಿತ ತಪಾಸಣೆಗಳನ್ನು ಈ ಶಿಬಿರದಲ್ಲಿ ನಡೆಸಲಾಯಿತು. ಸಾಕಷ್ಟು ಕಲಾವಿದರು ಈ ಶಿಬಿರದಲ್ಲಿ ಭಾಗಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮುಂದಿನ ದಿನಗಳಲ್ಲೂ ಇಂತಹ ಶಿಬಿರಗಳನ್ನು ಆಯೋಜಿಸುವ ಉದ್ದೇಶವಿದ್ದು, ಇನ್ನೂ ಹೆಚ್ಚಿನ ಜನರು ಇದರ ಉಪಯೋಗ ಪಡೆದುಕೊಳ್ಳಬೇಕು. ಆರೋಗ್ಯ ಪ್ರತಿಯೊಬ್ಬರಿಗೂ ಮುಖ್ಯ. ಉಚಿತ ಆರೋಗ್ಯ ಶಿಬಿರಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಕಲಾವಿದರ ಸಂಘದ ಖಜಾಂಚಿ ದೊಡ್ಡಣ್ಣ ಹೇಳಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.