ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಗಾರ್ಗಿ ಕಾರೆಹಕ್ಲು ನಿರ್ದೇಶನದ ʼಹಕ್ಕಿಗಾಗಿʼ ಚಿತ್ರ
ಪರಿ ಮೂವೀ ಮೇಕರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹಾಗೂ ಗಾರ್ಗಿ ಕಾರೆಹಕ್ಲು ನಿರ್ದೇಶನದ ʼಹಕ್ಕಿಗಾಗಿʼ ಚಿತ್ರ ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನವಾಗಿದೆ. ಪ್ರದರ್ಶನದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಮಲೆನಾಡಿನ ಒಂದು ಚಿಕ್ಕ ಹಳ್ಳಿಯ ಮುಗ್ದ ಮನಸಿನ ಮಕ್ಕಳು ತಮ್ಮ ಸ್ನೇಹಿತನೆಂದು ಭಾವಿಸಿದ್ದ ಒಂದು ಪುಟ್ಟ ಹಕ್ಕಿಯು ಕಾಣದಾದಾಗ ಅದು ಏಕೆ ಕಣ್ಮರೆಯಾಯಿತು, ಅದು ಮತ್ತೆ ಹಿಂದಿರುಗಿ ಬರಲು ಏನು ಮಾಡಬೇಕೆಂದು ಶಾಲಾ ಗುರುಗಳ ಮತ್ತು ಹಿರಿಯರ ಮಾರ್ಗದರ್ಶನ ಪಡೆದು ಹಕ್ಕಿಯ ಹುಡುಕಾಟ ನಡೆಸುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಈ ಚಿತ್ರದ ವಿಶೇಷವೆಂದರೆ, ಮಲೆನಾಡಿನ ಕಲಾವಿದರು ಹಾಗೂ ತಂತ್ರಜ್ಞರು ಸೇರಿ ಮಾಡಿರುವ ಚಿತ್ರವಿದು. ಚಿತ್ರೀಕರಣ, ಮಾತಿನ ಜೋಡಣೆ, ಸಂಕಲನ ಎಲ್ಲಾ ಕೆಲಸಗಳು ಮಲೆನಾಡಿನಲ್ಲೇ ನಡೆದಿರುವುದು ಈ ಚಿತ್ರದ ವಿಶೇಷ ಎಂದು ಕಲಾವಿದ ವೈದ್ಯನಾಥ್ ಹೇಳಿದರು.
ತಮ್ಮ ನಿರ್ಮಾಣದ ಚಿತ್ರ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿರುವುದಕ್ಕೆ ನಿರ್ಮಾಪಕ ಹರೀಶ್ ಸಂತಸ ವ್ಯಕ್ತಪಡಿಸಿದರು.
ನಟ ಡಾ.ನಾಗನಾಥ್ ಸಹ ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡರು. ಛಾಯಾಗ್ರಾಹಕ ಸಂತೋಷ್ ಪಪ್ಪು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.