ಬೆಂಗಳೂರು: ತಮಿಳುನಾಡು ಫಲಿತಾಂಶ ಆಶ್ಚರ್ಯ ಮೂಡಿಸಿದ್ದು, ಅಲ್ಲಿ ಹೊಸ ಯುಗಾರಂಭವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿಶ್ಲೇಷಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಕುರಿತು ಮಾತನಾಡಿದ ಅವರು, ತಮಿಳುನಾಡು ಫಲಿತಾಂಶ ಹೀಗೆ ಬರಲಿದೆ ಎಂದು ಊಹಿಸಲು ಆಗಲಿಲ್ಲ. ಶೇ.30-40 ರಷ್ಟು ಮತಗಳು ಆಚಚೀಚೆ ಹೋಗಬಹುದು ಎಂದು ನಿರೀಕ್ಷಿಸಿದ್ದೆವು. ಈ ಪ್ರಮಾಣದಲಿ ಬದಲಾವಣೆ ಆಗುತ್ತದೆ ಎಂದು ಊಹಿಸಿರಲಿಲ್ಲ ಎಂದರು.
ಕೇರಳದಲ್ಲಿ ಕಾಂಗ್ರೆಸ್ ಗೆಲ್ಲುವ ನಂಬಿಕೆ ಇತ್ತು. ಅಲ್ಲಿ ಎಲ್ ಡಿಎಫ್ ಅಧಿಕಾರಕ್ಕೆ ಬಂದು 10 ವರ್ಷಗಳಾಗಿದ್ದವು. ಜನ ಬದಲಾವಣೆ ಬಯಸಿದ್ದರು. ಹಾಗಗಿ ಅಲ್ಲಿ ದೊಡ್ಡ ಬೆಂಬಲ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಸ್ಸಾಂನಲ್ಲಿ ನನಗೆ ಜವಬ್ದಾರಿ ನೀಡಿದ್ದರು. 50 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಡಿಲಿಮಿಟೇಷನ್ ಮತ್ತು ಆಡಳಿತ ಯಂತ್ರ ದುರುಪಯೋಗದ ಕಾರಣಕ್ಕೆ ಸೋಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತ ಪರಿಷ್ಕರಣೆ ಹೆಸರಿನಲ್ಲಿ ಭಾರಿ ಪ್ರಮಾಣದಲ್ಲಿ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಗೆಲ್ಲಲೇ ಬೇಕೆಂಬ ಹಠದಿಂದ ಬಿಜೆಪಿ ಎಲ್ಲ ವಾಮ ಮಾರ್ಗಗಳನ್ನು ಅನುಸರಿಸಿದೆ ಎಂದು ವಿಶ್ಲೇಷಿಸಿದರು.
ದಾವಣಗೆರೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಎಸ್ಡಿಪಿಐ ನಮಗೆ ಡೇಂಜರ್ ಆಗಿ ಪರಿಣಮಿಸಿದೆ. ಎಸ್ಡಿಪಿಐ ಅವರನ್ನು ಹಗುರವಾಗಿ ಪರಿಗಣಿಸಿರಲಿಲ್ಲ. ಮುಸ್ಲಿಂ ನಾಯಕರು ಕೆಲಸ ಮಾಡಿಲ್ಲ ಎಂಬ ಬಗ್ಗೆ ನಾನು ಮಾತನಾಡುವುದಿಲ್ಲ. ಎಸ್ಡಿಪಿಐ 12 ಸಾವಿರ ವೋಟ್ ತೆಗೆದುಕೊಂಡಿದೆ. ಗ್ಯಾರಂಟಿಗಳು ರಾಜ್ಯದಲ್ಲಿ ಚೆನ್ನಾಗಿ ನಡೆಯುತ್ತಿದ್ದು, ಜನ ಸ್ಪಂದಿಸಿದ್ದಾರೆ. ಇದಕ್ಕೆ ಈ ಫಲಿತಾಂಶ ಉದಾಹರಣೆ ಎಂದು ಹೇಳಿದರು.