ಬೆಂಗಳೂರಿನಲ್ಲಿ ಗ್ಯಾಸ್ ಸೋರಿಕೆಯಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಪೂರ್ಣಿಮಾ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾರೆ. ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುಶ್ರೀ ಲೇಔಟ್ನಲ್ಲಿ ಕಳೆದ ಮಂಗಳವಾರ ಈ ದುರ್ಘಟನೆ ನಡೆದಿದೆ.
ಬಾಡಿಗೆದಾರನ ಮನೆಯಲ್ಲಿ ಗ್ಯಾಸ್ ಸೋರಿಕೆ ವಾಸನೆ ಬರುತ್ತಿದೆ ಎಂಬುದನ್ನು ಗಮನಿಸಿದ ಮನೆಯ ಮಾಲೀಕಿ ಪೂರ್ಣಿಮಾ ಪರಿಶೀಲನೆಗೆ ಹೋಗಿದ್ದರು.
ಈ ವೇಳೆ ಲೈಟ್ ಸ್ವಿಚ್ ಆನ್ ಮಾಡಿದ ಕ್ಷಣದಲ್ಲೇ ಸ್ಫೋಟ ಸಂಭವಿಸಿ ಪೂರ್ಣಿಮಾ ಹಾಗೂ ಬಾಡಿಗೆದಾರ ವೆಂಕಟೇಶ್ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಪೂರ್ಣಿಮಾ ಇಂದು ಮೃತಪಟ್ಟಿದ್ದು, ಗಾಯಗೊಂಡಿರುವ ವೆಂಕಟೇಶ್ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.