ಬೆಂಗಳೂರು: ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು 94ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲೂ ಅವರು ರಾಜ್ಯ ಮತ್ತು ಪಕ್ಷದ ಹಿತಕ್ಕಾಗಿ ಹೋರಾಟ ನಡೆಸುವ ಭರವಸೆ ನೀಡಿದರು.
ಗೌಡರ ಹುಟ್ಟು ಹಬ್ಬಕ್ಕೆ ಪ್ರಧಾನಿ ಮOದಿ, ಅಮಿತ್ ಶಾ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.
ಜೆ.ಪಿ ನಗರದ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ನನ್ನ ಕೈಲಾದ ಮಟ್ಟಿಗೆ ರಾಜ್ಯದ ಜನತೆಗೆ ಕೆಲಸ ಮಾಡುತ್ತಿದ್ದೇನೆ. ಜನತೆಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವ ದೃಢ ಸಂಕಲ್ಪ ಮಾಡಿದ್ದೇನೆ. ನನಗೆ 93 ಅಯ್ತು ಎಂದು ಮನೆಯಲ್ಲಿ ಕೂರುವುದಿಲ್ಲ. ವ್ಹೀಲ್ ಚೇರ್ ನಲ್ಲೇ ಓಡಾಡಿಕೊಂಡು ಹೋರಾಟ ನಡೆಸುವುದಾಗಿ ಹೇಳಿದರು.
ಸುದೀರ್ಘ 68 ವರ್ಷ ರಾಜಕೀಯದಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈಗಲೂ ಹೋರಾಟ ಮಾಡುವ ಹುಮ್ಮಸ್ಸು ಇದೆ. ಯಾರು ಗುರುತಿಸಲಿ ಬಿಡಲಿ, ನನ್ನ ಕೆಲಸವನ್ನು ನಾನು ಮಾಡುವೆ ಎಂದರು.
ಬಿಜೆಪಿ-ಜೆಡಿಎಸ್ ನಡುವೆ ಯಾವುದೇ ಬಿಕ್ಕಟ್ಟು ಬರುವುದಿಲ್ಲ. ನಾವು NDA ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಮೋದಿ, ಅಮಿತ್ ಶಾ ಅವರ ಜೊತೆ ನಮ್ಮ ಸಂಬಂಧವಿದೆ. ಇದರಲ್ಲಿ ಯಾವುದೇ ಬಿಕ್ಕಟ್ಟು ಬರುವುದಿಲ್ಲ ಎಂದರು.
ಇದೇ ವೇಳೆ ಕಾರ್ಯಕರ್ತರಿಗೆ ಸಂದೇಶ ಕೊಟ್ಟ ಗೌಡರು, ನಿಷ್ಟೆಯಿಂದ ನಮ್ಮ ಪಕ್ಷದ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಾಗಿ ಪಕ್ಷದ ಕೆಲಸವನ್ನು ಮಾಡಬೇಕು. ಕುಮಾರಸ್ವಾಮಿ ಅವರು ವಹಿಸುವ ಜವಾಬ್ದಾರಿಯನ್ನು ನಿಭಾಯಿಸಿ ಎಂದು ಮನವಿ ಮಾಡುವೆ ಎಂದು ಹೇಳಿದರು.
ಇಂದು ಮುಂಜಾನೆಯಿಂದಲೂ ಪಕ್ಷದ ಶಾಸಕರು, ಕಾರ್ಯಕರ್ತರು ಅಭಿಮಾನಿಗಳು ದೇವೇಗೌಡರ ನಿವಾಸಕ್ಕೆ ಆಗಮಿಸಿ ಶುಭಾಶಯ ಕೋರುತ್ತಲೇ ಇದ್ದಾರೆ.