ಹಾಸನ : ವೃದ್ಧಾಪ್ಯದಲ್ಲಿ ಆರೈಕೆಯ ಕೊರತೆ ಎದುರಿಸಿದ್ದ ದಂಪತಿ ರೈಲಿಗೆ ಸಿಲುಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ. ಮೃತರನ್ನು ಸೋಮವಾರಪೇಟೆ ತಾಲ್ಲೂಕಿನ ಹಾರೆಹೊಸೂರು ಗ್ರಾಮದ ಡೇನಿಯಲ್ (80) ಮತ್ತು ಮೇರಿ (73) ಎಂದು ಗುರುತಿಸಲಾಗಿದೆ.ನಗರದ ಕರಿಗೌಡ ಕಾಲೋನಿ ಸಮೀಪ ರೈಲು ಹಳಿಯಲ್ಲಿ ಇಬ್ಬರ ಮೃತ ದೇಹ ಪತ್ತೆಯಾಗಿದೆ. ಡೇನಿಯಲ್ ಅವರು ಮೇಸ್ತಿ ಕೆಲಸ ಮಾಡುತ್ತಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದರು. ಇಬ್ಬರೂ ವಿವಾಹಿತರಾಗಿದ್ದು, ಒಬ್ಬರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರೆ, ಮತ್ತೊಬ್ಬರು ಹಾರಹೊಸೂರಿನಲ್ಲಿ ಕಾಫಿ ತೋಟದ ನೋಡಿಕೊಳ್ಳುತ್ತಿದ್ದಾರೆ. ಆದರೆ ಪೋಷಕರಿಗೆ ವಯಸ್ಸಾದರೂ ಕೂಡ ಇಬ್ಬರು ಕೂಡ ನೋಡಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ.
ವಯಸ್ಸಾದ ಹಿನ್ನಲೆ ಸರಿಯಾದ ಸಮಯಕ್ಕೆ ಆಹಾರ ಒದಗಿಸದಿರುವುದು ಹಾಗೂ ಅನಾರೋಗ್ಯದ ಸಂದರ್ಭದಲ್ಲಿ ಚಿಕಿತ್ಸೆ ನೀಡದಿರುವುದು ದಂಪತಿಯನ್ನು ಮಾನಸಿಕವಾಗಿ ಕುಗ್ಗಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಂಪತಿ ವಿರಾಜಪೇಟೆಯ ವೃದ್ಧಾಶ್ರಮದಲ್ಲಿ ವಾಸವಾಗಿದ್ದರು. ಶನಿವಾರ ಅಲ್ಲಿಂದ ಕೆಎಸ್ಆರ್ಟಿಸಿ ಬಸ್ ಮೂಲಕ ಹಾಸನಕ್ಕೆ ಬಂದಿದ್ದ ದಂಪತಿ, ಹೊಸ ಬಸ್ ನಿಲ್ದಾಣದ ಸಮೀಪ ರೈಲು ಹಳಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಹಾಸನ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.