ಚಿಕ್ಕಬಳ್ಳಾಪುರ: ಬೇಸಿಗೆ ಆರಂಭವಾಗಿದ್ದು, ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಆತಂಕ ಎದುರಾಗಿದೆ. ಮತ್ತೊಂದು ಕಡೆ ಲಭ್ಯವಿರುವ ನೀರೂ ಸಹ ಕುಡಿಯಲು ಯೋಗ್ಯ ಅಲ್ಲ ಎಂದು ವರದಿಗಳು ಹೇಳುತ್ತಿವೆ. ಹೌದು! ಜಿಲ್ಲೆಯ 1,274 ಹಳ್ಳಿಗಳ ಪೈಕಿ ನೂರಾರು ಗ್ರಾಮಗಳಲ್ಲಿ ಕುಡಿಯುವ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬ ಆಘಾತಕಾರಿ ಮಾಹಿತಿ ಗುಣಮಟ್ಟ ಪರೀಕ್ಷಾ ವರದಿಯಿಂದ ಬಯಲಾಗಿದೆ. ನೀರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಪ್ಲೋರೈಡ್ ಮತ್ತು ನೈಟ್ರೇಟ್ ಪತ್ತೆಯಾಗಿರುವುದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್. ಮಹೇಶ ಕುಮಾರ್ ನೀಡಿರುವ ಮಾಹಿತಿಯಂತೆ, ಅಶುದ್ಧ ನೀರಿನ ಸೇವನೆಯಿಂದ ಹಲ್ಲು ಮತ್ತು ಮೂಳೆಗಳ ಬೆಳವಣಿಗೆ ಕುಂಠಿತ, ಮೂಳೆ ಸವೆತ, ಅತಿಯಾದ ಸುಸ್ತು ಮತ್ತು ಎದೆಯುಸಿರು ಸಮಸ್ಯೆಯಾಗಿದೆ. ಕಿಡ್ನಿ ಮೂತ್ರಪಿಂಡ ಮತ್ತು ಲಿವರ್ ಯಕೃತ್ತು ಸಮಸ್ಯೆಗಳು ಹಾಗೂ ಬಹು ಅಂಗಾಂಗ ವೈಫಲ್ಯದ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಜನರ ಅನುಕೂಲಕ್ಕಾಗಿ ಪ್ರತಿ ಎರಡು ಕಿಲೋಮೀಟರ್ಗೆ ಒಂದರಂತೆ ಶುದ್ಧ ನೀರಿನ ಘಟಕ ಅಳವಡಿಸಲಾಗಿದೆ. ಜಿಲ್ಲೆಯ 10 ಗ್ರಾಮಗಳಲ್ಲಿ ಚಿಕ್ಕಬಳ್ಳಾಪುರ-3, ಗೌರಿಬಿದನೂರು-5, ಶಿಡ್ಲಘಟ್ಟ-2 ನೀರು ಅತ್ಯಂತ ಅಶುದ್ಧವಾಗಿದ್ದು, ಆಯಾ ಪಂಚಾಯಿತಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ನಿಮ್ಮ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಮಾತ್ರ ಕುಡಿಯಲು ಬಳಸಿ. ಸುಸ್ತು ಅಥವಾ ಕೀಲು ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಪ್ಲೊರೈಡ್ ಪ್ರಭಾವ ತಗ್ಗಿಸಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ ಸೇವಿಸಿ ಎಂದು ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.