ಬೆಂಗಳೂರು: ಕ್ಷೇತ್ರದ ಹಿತಕ್ಕಾಗಿ ಎಸ್ಮಾ ಕಾಯಿದೆ ಅಡಿಯಲ್ಲಿ ಜೈಲಿಗೆ ಹೋಗಲೂ ಸಿದ್ಧ ಎಂದು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಗುಡುಗಿದ್ದಾರೆ.
ಅವೈಜ್ಞಾನಿಕ ಭೂಮಿಗೆ ಕಸ ಸುರಿಯುವ (ಲ್ಯಾಂಡ್ ಫಿಲ್) ಪದ್ಧತಿಯನ್ನು ತಪ್ಪಿಸಲು- ಬೆಂಗಳೂರಿನ ಕಸ ತೆಗೆದುಕೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನತೆ ಏನು ಪಾಪ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ತಾಲ್ಲೂಕಿನ ಜನತೆಯ ಪರವಾಗಿ ನನ್ನ ಹೋರಾಟವನ್ನು ನಾನು ನಿಲ್ಲಿಸುವುದಿಲ್ಲ. ಯಾವುದೇ ಕಾರಣಕ್ಕೂ ನಿಗದಿಪಡಿಸಿದ ಕಸದ ವಾಹನ, ಒಎಂ ಕಾಪಿಯಲ್ಲಿ ಏನಿದೆಯೋ ಅದನ್ನು ಬಿಟ್ಟು ಉಳಿದ ಹೆಚ್ಚುವರಿ ವಾಹನಗಳನ್ನು ನಾನು ನಿಲ್ಲಿಸುತ್ತೇನೆ ಎಂದು ತಿಳಿಸಿದರು.
ತಾಲ್ಲೂಕಿನ ಜನತೆ ಪರವಾಗಿ, ತಾಲ್ಲೂಕಿನ ಆರೋಗ್ಯದ ಹಿತದೃಷ್ಟಿಯಿಂದ ತಾವು ಮಾಡುತ್ತಿರುವ ಜಲ- ವಾಯು ಮಾಲಿನ್ಯದ ವಿರುದ್ಧ, ಅಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ಹೋರಾಟ ಖಂಡಿತವಾಗಿ ಈಗ ಶುರುವಾಗಿದೆ. ಇನ್ನು ಮುಂದಕ್ಕೆ ಇನ್ನೂ ಹೆಚ್ಚಿನ ಹೋರಾಟವನ್ನು ರೈತರು, ಸ್ಥಳೀಯರು ಹಾಗೂ ಜನಪ್ರತಿನಿಧಿಗಳಿಂದ ರೂಪಿಸುತ್ತೇವೆ ಎಂದು ಹೇಳಿದರು.