ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ 'ರಾಮಾಯಣ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದೆ. ನಿತೀಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯ ಆಧಾರಿತ ಸಿನಿಮಾ ಈಗ ಸ್ಟಾರ್ ತಾರಾಗಣದಿಂದಲೇ ಸುದ್ದಿಯಲ್ಲಿದೆ. ಬಾಲಿವುಡ್ನ ಪ್ರತಿಷ್ಠಿತ ಪ್ರಾಜೆಕ್ಟ್ ಆಗಿರುವ 'ರಾಮಾಯಣ'ದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದರೆ, ಸೌತ್ ಸುಂದರಿ ಸಾಯಿ ಪಲ್ಲವಿ ಸೀತೆಯಾಗಿ ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ, ಹನುಮಾನ್ ಜಯಂತಿಯ ಶುಭ ಸಂದರ್ಭದಲ್ಲೇ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ದೊಡ್ಡ ಸರ್ಪ್ರೈಸ್ ನೀಡಿದೆ.
ಕನ್ನಡಿಗರ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ಲಂಕೇಶ್ವರ ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಕೂಡ ಈ ಚಿತ್ರಕ್ಕೆ ಸಹ-ನಿರ್ಮಾಪಕರಾಗಿ ಕೈಜೋಡಿಸಿರುವುದು ವಿಶೇಷ. ಇನ್ನು ಚಿತ್ರದಲ್ಲಿ ಶೂರ್ಪನಖಿ ಪಾತ್ರಕ್ಕೆ ರಾಕುಲ್ ಪ್ರೀತ್ ಸಿಂಗ್ ಆಯ್ಕೆಯಾಗಿದ್ದಾರೆ. ಆರಂಭದಲ್ಲಿ ಕಾಜಲ್ ಅಗರ್ವಾಲ್ ಅವರ ಹೆಸರು ಕೇಳಿಬಂದಿತ್ತಾದರೂ, ಅಂತಿಮವಾಗಿ ಕನ್ನಡದ 'ಗಿಲ್ಲಿ' ಸಿನಿಮಾ ಖ್ಯಾತಿಯ ರಾಕುಲ್ ಈ ಪ್ರಮುಖ ಪಾತ್ರಕ್ಕೆ ಅಂತಿಮಗೊಂಡಿದ್ದಾರೆ.
ಸೀತೆಗಿಂತ ಶೂರ್ಪನಖಿ ಹೆಚ್ಚು ಸುಂದರವಾಗಿ ಕಾಣಬೇಕು ಎನ್ನುವ ಕಾರಣಕ್ಕೆ ಕಾಜಲ್ ಅವರ ಬದಲಾಗಿ ರಾಕುಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿವೆ. ಯಶ್ ಅವರ ರಾವಣನ ಲುಕ್ ಅನ್ನು ಇನ್ನೂ ಗುಟ್ಟಾಗಿ ಇಡಲಾಗಿದ್ದು, ಅಭಿಮಾನಿಗಳಲ್ಲಿ ಕಾತರ ಹೆಚ್ಚಿಸಿದೆ.ಹಿಂದಿ, ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿರುವ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದೆ