ನವದೆಹಲಿ: ತಮಿಳುನಾಡಿನಲ್ಲಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ಘೋಷಿಸಿದ ಬೆನ್ನಲ್ಲೇ ಡಿಎಂಕೆ ಇಂಡಿಯಾ ಮೈತ್ರಿಕೂಟದಿಂದ ದೂರ ಸರಿಯುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಡಿಎಂಕೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಕ ಕುಳಿತುಕೊಳ್ಳುವುದಿಲ್ಲ. ಆದ್ದರಿಂದ ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವಂತೆ ಕೋರಿದೆ.
ಈ ಸಂಬಂಧ ಪಕ್ಷದ ಸಂಸದೆ ಕನಿಮೋಳಿ ಕರುಣಾನಿಧಿ ಅವರು ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ನಮ್ಮ ವಿರೋಧಿ ಬಣವನ್ನು ಬೆಂಬಲಿಸುತ್ತಿರುವುದರಿಂದ, ಲೋಕಸಭೆಯಲ್ಲಿ ಆ ಪಕ್ಷದ ಸಂಸದರ ಪಕ್ಕದಲ್ಲಿ ಕುಳಿತುಕೊಳ್ಳುವುದು ಇನ್ನು ಮುಂದೆ ನಮಗೆ ಸೂಕ್ತವಲ್ಲ. ಹಾಗಾಗಿ ಡಿಎಂಕೆ ಸಂಸದರಿಗೆ ಪ್ರತ್ಯೇಕ ಆಸನ ನಿಗದಿಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ವರ್ಷದ ಆರಂಭದಲ್ಲಿಯೇ ಡಿಎಂಕೆ ಕಾಂಗ್ರೆಸ್ ನಡುವೆ ಬಿಕ್ಕಟ್ಟು ಆರಂಭವಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ಸೀಟುಗಳಿಗೆ ಪಟ್ಟು ಹಿಡಿದಿತ್ತು. ಆದರೆ ಡಿಎಂಕೆ ಕೇವಲ 25-30 ಸೀಟುಗಳನ್ನು ನೀಡಲು ಮಾತ್ರ ಒಪ್ಪಿತ್ತು. ಇನ್ನು ಚುನಾವಣೋತ್ತರ ಸಂದರ್ಭದಲ್ಲಿ ವಿಧಾನಸಭೆಯಲ್ಲಿ 5 ಶಾಸಕರನ್ನು ಹೊಂದಿರುವ ಕಾಂಗ್ರೆಸ್, ಟಿವಿಕೆಗೆ ಬೆಂಬಲ ಘೋಷಿಸಿದೆ.
ಈ ಬೆಳವಣಿಗೆಯು ರಾಷ್ಟ್ರ ಮಟ್ಟದಲ್ಲಿ ‘ಇಂಡಿಯಾ’ ಒಕ್ಕೂಟಕ್ಕೆ ಪ್ರಬಲ ಹೊಡೆತ ಕೊಟ್ಟಂತಾಗಿದೆ. ಬಿಜೆಪಿ ನೇತೃತ್ವದ ಎನ್ ಡಿ ಎ ವಿರುದ್ಧದ ಹೋರಾಟಕ್ಕೆ ಹಿನ್ನೆಡೆ ಎಂದೇ ಭಾವಿಸಲಾಗಿದೆ. ಸದನದ ಒಳಗೆ ಪ್ರತಿಪಕ್ಷ ಕಾಂಗ್ರೆಸ್ ಬೆಂಬಲಿಸುವುದೇ ಎಂದು ಕಾದುನೋಡಬೇಕಿದೆ.