ಬೆಂಗಳೂರು: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಈಗ ನಡೆಯುತ್ತಿರುವ ಯುದ್ಧ ಸರಿಯಲ್ಲ. ವೈಮಾನಿಕ ದಾಳಿಯಲ್ಲಿ ಮಕ್ಕಳು ಸತ್ತಿದ್ದಾರೆ. ಏನೂ ಮಾಡದ ಮಕ್ಕಳ ಶಾಲೆ ಮೇಲೆ ಏಕೆ ದಾಳಿ ಮಾಡಬೇಕು. ಇದು ಖಂಡನೀಯ. ದುಬೈ ಸೇರಿದಂತೆ ಕೊಲ್ಲಿ ದೇಶಗಳಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಣೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅವರು ನಗರದಲ್ಲಿ ತಮ್ಮನ್ನು ಬೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ನಾಟಕ, ಕೇರಳ ಸೇರಿದಂತೆ ಭಾರತೀಯ ನಾಗರಿಕರನ್ನ ರಕ್ಷಣೆ ಮಾಡಬೇಕು ಎಂದು ಕೇಂದ್ರ ಸರ್ಕಾರದ ಬಳಿ ಮನವಿ ಮಾಡುತ್ತೇನೆ. ನಾಗರಿಕರ ರಕ್ಷಣೆಗೆ ಏನೂ ಒತ್ತಡ ಹೇರಬೇಕೋ ಆ ಕೆಲಸವನ್ನು ನಾವು ಮಾಡುತ್ತೇವೆ. ಈ ಕಾರಣಕ್ಕೆ ಕಮಿಷನರ್ ಅವರಿಗೆ ರಾಜ್ಯ ಸರಕಾರ ನಿರ್ದೇಶನ ನೀಡಿದೆ.
ಭಾರತೀಯರು, ಕನ್ನಡಿಗರಿಗೆ ಧೈರ್ಯ ತುಂಬುವ ಕೆಲಸ ನಾವು ಮಾಡುತ್ತೇವೆ. ಪ್ರಪಂಚದ ಯಾವ ಮನುಷ್ಯರು ಹೀಗೆ ಸಾಯುವುದನ್ನ ನಾನು ಖಂಡಿಸುತ್ತೇನೆ. ದುಬೈನಲ್ಲಿ ನಮ್ಮ ಶಾಸಕರಾದ ಎ.ಸಿ. ಶ್ರೀನಿವಾಸ್, ಭರತ್ ರೆಡ್ಡಿ ಅವರ ಕುಟುಂಬ, ಎಂಎಲ್ ಸಿ ಭೋಜೇಗೌಡ ಅವರು ಸಿಲುಕಿಕೊಂಡಿದ್ದಾರೆ. ಜೊತೆಗೆ ಅನೇಕ ನಾಗರಿಕರು ಸಿಲುಕಿಕೊಂಡಿದ್ದಾರೆ. ಇವರನ್ನೆಲ್ಲಾ ರಕ್ಷಣೆ ಮಾಡಬೇಕು. ದಕ್ಷಿಣ ಭಾರತದ ಅನೇಕರು ದುಬೈ, ಸೌದಿಯಲ್ಲಿದ್ದಾರೆ. ಅನೇಕ ಭಾರತೀಯ ವಿದ್ಯಾಸಂಸ್ಥೆಗಳಿವೆ.
ಅಲ್ಲಿರುವ ಕನ್ನಡ ಸಂಘಟನೆಗಳು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಅನೇಕ ಪರಿಚಿತರಿಂದ ವ್ಯಾಪಕವಾಗಿ ಕರೆಗಳು ಬರುತ್ತಿವೆ. ನಮ್ಮ ಜೊತೆ ವ್ಯವಹಾರ ನಡೆಸುವವರು, ಪರಿಚಿತರು ಗಾಬರಿಯಾಗಿದ್ದಾರೆ. ಸೌದಿಯಲ್ಲಿ ಏರ್ ಸ್ಟೈಕ್, ಕ್ಷಿಪಣಿಗಳು ಹಾರುತ್ತಿರುವುದು ಕಾಣುತ್ತಿದೆ ಎಂದು ಹೇಳಿದ್ದಾರೆ. ನಾನು ಆತಂಕ ಪಡುವುದು ಬೇಡ ಎಂದು ಹೇಳಿದ್ದೇನೆ. ನಾವು ಧೈರ್ಯ ತುಂಬುವಂತಹ ಕೆಲಸ ಮಾಡಬೇಕು.
ಅಮೇರಿಕಾ ಯುದ್ಧವನ್ನು ನಿಲ್ಲಿಸಬೇಕಿದೆ. ಈ ಯುದ್ಧ ದಿಂದ ಭಾರತಕ್ಕೂ ಗಂಡಾಂತರವಾಗಲಿದೆ. ನಮ್ಮ ಸರ್ಕಾರದಿಂದಲೂ ನಮ್ಮ ಜನರಿಗೆ ಧೈರ್ಯ ತುಂಬುವ ಕೆಲಸವಾಗುತ್ತಿದೆ. ಶಾಂತಿ ಕಾಪಾಡಲು ನಾವೆಲ್ಲರೂ ಮನವಿ ಮಾಡೋಣ.
ಒಂದೇ ಬಾಂಬ್ ದಾಳಿಗೆ 70 ಮಂದಿ ಪುಟಾಣಿ ಶಾಲಾ ಮಕ್ಕಳು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನ ಗಾಬರಿಯಾಗಿದ್ದಾರೆ ಎಂದಿದ್ದಾರೆ.